ಮೈಸೂರು: ಮುಂದಿನ ಲೋಕಸಭಾ ಸಭೆ ಚುನಾವಣೆಯ ವೇಳೆಯಲ್ಲಿ ಯಾವುದೇ ಪಕ್ಷದ ಪರವೂ ಕೂಡ ಪ್ರಚಾರ ಮಾಡುವುದಿಲ್ಲ ಎಂದು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರಮನೆಯೊಂದಿಗೆ ಎಲ್ಲಾ ಪಕ್ಷಗಳ ಸಂಬಂಧ ಚೆನ್ನಾಗಿದೆ. ಎಲ್ಲರೊಂದಿಗೂ ನಾವು ಉತ್ತಮವಾಗಿ ಇರಲು ಪ್ರಯತ್ನ ಮಾಡುತ್ತೇವೆ. ಆದ್ದರಿಂದ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪರ ಪ್ರಚಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ನಿರ್ಧಾರದ ಬಗ್ಗೆ ಬೇಸರ:
ಮೈಸೂರು ಸಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿದ್ದು, ಮೈಸೂರು ರಾಜವಂಸ್ಥರು ನೀಡಿರುವ ಆಪಾರ ಕೊಡುಗೆಗಳು ಇಂದಿಗೂ ಇದೆ. ಅವುಗಳನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಆದರೆ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆ ಕೆಡವಿ ಮತ್ತೆ ಪುನರ್ ನಿರ್ಮಾಣ ಮಾಡುವ ವಿಚಾರ ಮಾಧ್ಯಮಗಳಿಂದ ನನಗೆ ತಿಳಿಯಿತು. ಆದರೆ ತಜ್ಞರ ವರದಿಗಳ ಪ್ರಕಾರ ಎರಡು ಪಾರಂಪರಿಕ ಕಟ್ಟಡಗಳನ್ನ ಕೆಡವದೆ ಅಭಿವೃದ್ಧಿ ಮಾಡಲು ಅವಕಾಶವಿದ್ದು, ಲ್ಯಾನ್ಸ್ ಡೌನ್, ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು ಎಂದರು.
ನಗರದಲ್ಲಿ ಇರುವ ಎಲ್ಲಾ ಪಾರಂಪರಿಕ ಕಟ್ಟಡಗಳನ್ನ ಕೆಡವುತ್ತಾ ಹೋದರೆ ಮೈಸೂರಿಗೆ ಸಾಂಸ್ಕೃತಿಕ ನಗರಿ ಎಂದು ಕರೆಯಲು ಮುಂದೊಂದು ದಿನ ಏನೂ ಇರುವುದಿಲ್ಲ. ಮೈಸೂರು ಮಹಾನಗರ ಪಾಲಿಕೆಗೆ ಕೆಡವುದರಲ್ಲಿ ಏಕೆ ಇಷ್ಟು ಆಸ್ತಕಿ ತೋರುತ್ತಿದೆ ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ. ಕಟ್ಡಡಗಳನ್ನು ಅಭಿವೃದ್ಧಿ ಪಡಿಸಿ ಬೇರೆ ಬೇರೆ ಉದ್ದೇಶಕ್ಕೆ ಬಳಸಲು ಅವಕಾಶ ಇದೆ. ಆದ್ದರಿಂದ ಅವುಗಳನ್ನ ಉಳಿಸಿಕೊಳ್ಳುವತ್ತ ಸರ್ಕಾರ ಗಮನ ನೀಡಬೇಕು. ಇದು ನಮ್ಮ ಆಸೆ ಮಾತ್ರವಲ್ಲ, ಸ್ಥಳೀಯ ಜನರ ಬೇಡಿಕೆಯೂ ಆಗಿದೆ. ಎಲ್ಲರ ಅಭಿಪ್ರಾಯ ಪಡೆದು ಚರ್ಚೆ ನಡೆಸಿದ ಬಳಿಕ ಸರ್ಕಾರ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv