ಕೋಲಾರ: ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ನಲ್ಲಿ ನಾಯಕರ ನಡುವೆ ಭಿನ್ನಮತ ಬುಗಿಲೆದ್ದಿದ್ದು, ಕೈ ನಾಯಕ ಕೆ.ಎಚ್.ಮುನಿಯಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ವಿ.ಮುನಿಯಪ್ಪ, ಸುಧಾಕರ್ ರೆಡ್ಡಿ, ಶ್ರೀನಿವಾಸಗೌಡ, ಕೊತ್ತೂರು ಮಂಜುನಾಥ್, ವೆಂಕಟಶಿವಾರೆಡ್ಡಿ, ಚೌಡರೆಡ್ಡಿ, ಎಂ.ನಾರಾಯಣಸ್ವಾಮಿ ಅವರನ್ನ ಮೂಲೆಗುಂಪು ಮಾಡಿದ್ದಷ್ಟೆ ಮುನಿಯಪ್ಪನವರ ಸಾಧನೆ. ಕೋಲಾರ ಜಿಲ್ಲೆಗೆ ಮುನಿಯಪ್ಪ ಕೊಡುಗೆ ಶೂನ್ಯ. ಹೀಗಾಗಿ ಬದಲಾವಣೆ ಬೇಕು ಎಂದು ಲೋಕಸಭೆ ಚುನಾವಣೆಗೆ ಹೆಚ್.ಸಿ ಮಹದೇವಪ್ಪರನ್ನು ಕಣಕ್ಕಿಳಿಸುವಂತೆ ಹೈಕಮಾಂಡ್ನಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಮುನಿಯಪ್ಪ ಅವರಿಗೆ ಟಿಕೆಟ್ ನೀಡಿದ್ದಲ್ಲಿ, ನಾವೆಲ್ಲ ಕೂತು ಚರ್ಚಿಸಿ ಮುಂದೇನು ಮಾಡಬೇಕು ಅಂತ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಾಳೆ ಎಲ್ಲವೂ ತಿಳಿಯುತ್ತದೆ. ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ, ಯಾವುದೇ ಕಾರಣಕ್ಕೂ ಮುನಿಯಪ್ಪ ಅವರಿಗೆ ಬೆಂಬಲ ನೀಡಲ್ಲ ಎಂದು ಪರೋಕ್ಷವಾಗಿ ನಾರಾಯಣಸ್ವಾಮಿ ಹೇಳಿದ್ದಾರೆ.