ಬೆಂಗಳೂರು: ತನ್ನ 8ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ (KKR) ಎದುರು ಸೋತ ಬಳಿಕ ʻನಾವು ಸೋಲೋದಕ್ಕೆ ಅರ್ಹರುʼಎಂದು ಆರ್ಸಿಬಿ (RCB) ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಬೇಸರ ವ್ಯಕ್ತಪಡಿಸಿದ್ದಾರೆ.
ಫಾಫ್ ಡು ಪ್ಲೆಸಿಸ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಕಳೆದ ಮೂರು ಪಂದ್ಯಗಳಿಂದ ತಾತ್ಕಾಲಿಕವಾಗಿ ನಾಯಕತ್ವದ ಹೊಣೆ ಹೊತ್ತಿರುವ ಕೊಹ್ಲಿ 2 ಪಂದ್ಯಗಳನ್ನ ಗೆಲ್ಲಿಸಿದ್ದಾರೆ. ಆದ್ರೆ ಬುಧವಾರ ಕೆಕೆಆರ್ ಎದುರು ತವರಿನಲ್ಲಿ ನಡೆದ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸುವ ಅವಕಾಶವಿದ್ದರೂ ಪ್ರಮುಖ ಬ್ಯಾಟ್ಸ್ಮ್ಯಾನ್ಗಳ ಕ್ಯಾಚ್ ಕೈಚೆಲ್ಲಿದ ಕಾರಣ, ಮ್ಯಾಚ್ ಸೋಲಬೇಕಾಯಿತು. ಇದನ್ನೂ ಓದಿ: ಕಳಪೆ ಫೀಲ್ಡಿಂಗ್ಗೆ ಬೆಂಗಳೂರು ಬಲಿ – ಕೋಲ್ಕತ್ತಾಗೆ 21 ರನ್ಗಳ ಜಯ
ಈ ಕುರಿತು ಪೋಸ್ಟ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಕೊಹ್ಲಿ, ಪ್ರಾಮಾಣಿಕವಾಗಿ ಹೇಳಬೇಕಂದ್ರೆ ನಾವೇ ಅವರಿಗೆ ಆಟ ಒಪ್ಪಿಸಿದ್ದೇವೆ, ನಾವು ಸೋಲೋದಕ್ಕೆ ಅರ್ಹರಾಗಿದ್ದೇವೆ. ಬೌಲಿಂಗ್ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದರೂ ಫೀಲ್ಡಿಂಗ್ನಲ್ಲಿ ಗುಣಮಟ್ಟ ಕಾಯ್ದುಕೊಂಡಿರಲಿಲ್ಲ ಎಂದು ಹತಾಶೆಯಿಂದ ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಬ್ಲಡ್ ಗ್ರೂಪ್ RCB ಪಾಸಿಟಿವ್ – ಫ್ಯಾನ್ಸ್ ಪೋಸ್ಟರ್ ವೈರಲ್
ಫೀಲ್ಡಿಂಗ್ನಲ್ಲಿ 4-5 ಓವರ್ಗಳ ಅವಧಿಯಲ್ಲಿ ಕೆಕೆಆರ್ಗೆ ಅವಕಾಶಗಳನ್ನ ಬಿಟ್ಟುಕೊಟ್ಟೆವು. ಇದರಿಂದ ಇನ್ನೂ 25 ರಿಂದ 30 ಹೆಚ್ಚುವರಿ ರನ್ ಆ ತಂಡಕ್ಕೆ ಸೇರ್ಪಡೆಯಾಯಿತು. ಮಧ್ಯಮ ಕ್ರಮಾಂಕದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿ, ಜೊತೆಯಾಟ (ಪಾಟ್ನರ್ಶಿಪ್) ಆಡುವುದನ್ನ ಕಡಿಮೆ ಮಾಡಿದೆವು. ಆದ್ರೆ ಕೊನೆಯ ಎರಡು ಓವರ್ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದು, ತಂಡದ ಸೋಲಿಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.
ಈ ಹಾದಿಯಲ್ಲಿ ನಾವು ಒಂದನ್ನು ಗೆದ್ದಿದ್ದೇವೆ, ಮತ್ತೊಂದನ್ನು ಕಳೆದುಕೊಂಡಿದ್ದೇವೆ. ಇದು ನಮಗೆ ಆಶ್ಚರ್ಯ ಉಂಟುಮಾಡುವ ವಿಷಯವೇನಲ್ಲ. ಆದ್ರೆ ಮುಂದೆ ಉತ್ತಮ ಸ್ಥಿತಿಯಲ್ಲಿರಲು ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಿದೆ ಎಂದು ಹೇಳಿದ್ದಾರೆ.