– ತೆರಿಗೆ ಹಣ ಕೊಳ್ಳೆಹೊಡಿಯಲು ರಾಜಕೀಯ
– ಕಿತ್ತಾಡೋ ಬದಲು ಸಮಸ್ಯೆ ಕೇಳಿದ್ರೆ ರೈತರ ಜೀವ ಉಳೀತಿತ್ತು
ಬಳ್ಳಾರಿ: ಕಳೆದ 20 ದಿನಗಳಿಂದ ನಡೆಯುತ್ತಿರುವ ರಾಜ್ಯ ರಾಜಕಾರಣದ ಹೈಡ್ರಾಮಾದ ವಿರುದ್ಧ ಬಳ್ಳಾರಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೆ, ಬೆಳೆಗೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಡ್ಯಾಮ್ಗಳಲ್ಲಿ ನೀರಿಲ್ಲದೆ ರೈತರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡ ಮೂರು ಪಕ್ಷಗಳು ವಿಧಾನಸೌಧದಲ್ಲಿ ಕಿತ್ತಾಡುತ್ತಾ ಕಾಲಹರಣ ಮಾಡುತ್ತಿವೆ. ರೈತರ ಸಮಸ್ಯೆಗೆ ಒಂದು ದಿನವೂ ಹೀಗೆ ಚರ್ಚೆ ನಡೆಸಲಿಲ್ಲ. ಶಾಸಕರನ್ನು 30-40-50 ಕೋಟಿ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. “ನಮ್ಮ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲು ರಾಜಕಾರಣ ಮಾಡೋದಾದರೆ ಯಾಕ್ರಿ ಬರ್ತೀರಾ? ಎಲ್ಲರು ರಾಜಿನಾಮೆ ಕೊಟ್ಟು ಮನೆಗೆ ಹೋಗ್ರಿ?” ಎಂದು ರೈತರು ರಾಜಕೀಯ ಹೈಡ್ರಾಮಕ್ಕೆ ಬೇಸತ್ತು ಕೆಂಡಾಮಂಡಲರಾಗಿದ್ದಾರೆ.
ಮೂರು ಪಕ್ಷದವರು ಸೇರಿಕೊಂಡು ರಾಜ್ಯದ ಮಾನ ಹರಾಜು ಹಾಕುತ್ತಿದ್ದಾರೆ. ಸದನದಲ್ಲಿ ಮೋಡ ಬಿತ್ತನೆ ಬಗ್ಗೆ ಚರ್ಚೆ ಆಗಬೇಕಿದ್ದ ಸಮದಲ್ಲಿ ಹೈಡ್ರಾಮ ಆಡುತ್ತಿದ್ದಾರೆ. ರಾಜಕಾರಣಿಗಳು ಅಕ್ರಮವಾಗಿ ಆಸ್ತಿ ಸಂಪಾದಿಸಿ ಅದರ ರಕ್ಷಣೆಗಾಗಿ ಅವರಿಗೆ ಕುರ್ಚಿ ಅವಶ್ಯಕತೆ ಇದೆ. ಅವರ ಆಟಗಳನ್ನ ಕಾರ್ಟೂನ್ ರೀತಿ ಟಿವಿಯಲ್ಲಿ ನೋಡುವ ರೀತಿ ಆಗಿದೆ ಎಂದು ರೈತರು ಹರಿಹಾಯ್ದರು.
ಅತ್ತ ಅಧಿಕಾರದಿಂದ ಕೆಳಗೆ ಇಳಿಸಲು ಬಿಜೆಪಿಯವರು ಕಿತ್ತಾಡುತ್ತಿದ್ದರೆ ಇತ್ತ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಪ್ಲಾನ್ ಮಾಡುತ್ತಿದೆ. ಸೋಮವಾರ ರಾತ್ರಿ 12 ಗಂಟೆಯವರೆಗೂ ಸದನ ನಡೆಸಿದ್ದಾರೆ. ಅದೇ ಸದನವನ್ನು ರಾಜ್ಯದ ಅಭಿವೃದ್ಧಿ, ರೈತರ ಹೋರಾಟಗಳ ಬಗ್ಗೆ ಮಾತಾಡಿದ್ದರೆ ನಮ್ಮ ರಾಜ್ಯದಲ್ಲಿ ಯಾವ ರೈತರು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.