ಬಳ್ಳಾರಿ: ಚುನಾವಣೆಯಲ್ಲಿ ಬೆನ್ನು ತೋರಿಸಿ ಹೋಗುವ ಜಾಯಮಾನ ನನ್ನದಲ್ಲ. ಬಳ್ಳಾರಿ ಲೋಕಸಭಾ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಸಿದ್ದೇನೆ. ಜೊತೆಗೆ ಕೇಂದ್ರ ಸರ್ಕಾರವೇ ಬಳ್ಳಾರಿಗೆ ಬರಲಿ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಇಂದು ನಡೆದ ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಿಹಿಸಿ, ವಧುವರರಿಗೆ ಶುಭ ಕೋರಿದರು. ಬಳಿಕ ಮಾತನಾಡಿದ ಶಾಸಕರು, ಬಳ್ಳಾರಿ ಉಪಚುನಾವಣೆಗೆ ರಾಜ್ಯ ಸರ್ಕಾರವೇ ಬರಲಿ, ಅದೇಷ್ಟೇ ಪ್ರಭಾವಿ ಸಚಿವರು ಬಂದರೂ ನಾವೇ ಗೆಲ್ಲುವುದು ಎಂದು ಟಾಂಗ್ ಕೊಟ್ಟಿದ್ದಾರೆ.
ಲೋಕಸಭಾ ಉಪಚುನಾವಣೆ ಬಳ್ಳಾರಿ ಕ್ಷೇತ್ರವು ಮಹಾಭಾರತ ಯುದ್ಧದ ಕಣದಂತಾಗಿದೆ. ಈ ಯುದ್ಧದಲ್ಲಿ ಬಿಜೆಪಿ ಗೆಲವು ಸಾಧಿಸುವ ಮೂಲಕ ಇತಿಹಾಸವನ್ನು ಮರಕಳಿಸುತ್ತದೆ ಎಂದ ಅವರು, ಬಿಜೆಪಿ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಈಗಾಗಲೇ 5 ಜನರ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ. ಶುಕ್ರವಾರ ಅಭ್ಯರ್ಥಿ ಹೆಸರು ಘೋಷಣೆ ಅಂತಿಮವಾಗಲಿದೆ ಎಂದು ತಿಳಿಸಿದರು.
ಟಿಕೆಟ್ ಆಕ್ಷಾಂಕಿ ಹಾಗೂ ಮಾಜಿ ಸಂಸದೆ ಶಾಂತಾ ಮಾತನಾಡಿ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧಳಾಗಿದ್ದೇನೆ. ನಾವು ಸೈನಿಕರಿದ್ದಂತೆ ಪಕ್ಷ ಸೂಚಿಸಿದಂತೆ ನಡೆಯುತ್ತೇವೆ. ಚುನಾವಣೆ ಹೋರಾಟಕ್ಕೆ ಸಜ್ಜಾಗುತ್ತೇವೆ. ಯಾರೇ ಅಭ್ಯರ್ಥಿಯಾದರೂ ಸರಿ, ಪ್ರತಿಸ್ಪರ್ಧೆ ನೀಡುತ್ತೇವೆ. ಟಿಕೆಟ್ ಸಿಕ್ಕರೆ ಬಳ್ಳಾರಿಯ ಮಗಳಾಗಿ ಕೆಲಸ ಮಾಡುತ್ತೇನೆ. ಒಂದು ವೇಳೆ ಕೈ ತಪ್ಪಿದರೆ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv