ತುಮಕೂರು: ಕಾಂಗ್ರೆಸ್ಸಿನಲ್ಲಿ ಸೃಷ್ಟಿಯಾಗಿರುವ ಒಳಜಗಳಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಭಾನುವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಸಹೋದರರು ಹಾಗೂ ಅವರ ತಂಡ ರಾಜೀನಾಮೆ ಕೊಡುವ ವಿಚಾರಕ್ಕೂ, ತಮಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನಡೆಯುತ್ತಿರುವ ಒಳಜಗಳಗಳಿಗೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ. ನಾವು 104 ಸ್ಥಾನಗಳನ್ನು ಗೆದ್ದಿದ್ದರೂ ಸಹ ವಿರೋಧಪಕ್ಷದ ಸ್ಥಾನದಲ್ಲೇ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ರೌಡಿಗಳು ಹಾಗು ಕಿಂಗ್ಪಿನ್ಗಳನ್ನು ಬಿಟ್ಟು ಶಾಸಕರ ಖರೀದಿಯಲ್ಲಿ ಬಿಜೆಪಿ ತೊಡಗಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿ, ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಕುಮಾರಸ್ವಾಮಿಯವರು ಆ ರೀತಿಯ ಬೇಜವಾಬ್ದಾರಿ ಹೇಳಿಕೆಯನ್ನು ನೀಡಬಾರದಿತ್ತು. ಒಂದು ವೇಳೆ ಮಾಹಿತಿ ಇದ್ದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಅಂತಹ ದಂಧೆಯನ್ನು ತಡೆಯಬೇಕೆ ಹೊರತು, ಸುಖಾಸುಮ್ಮನೆ ಬಿಜೆಪಿ ಮೇಲೆ ಆರೋಪಗಳನ್ನು ಮಾಡಬಾರದೆಂದು ಆಕ್ರೋಶ ಹೊರಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv