ಮೈಸೂರು: ಬಿಜೆಪಿ ಯುವ ಮೋರ್ಚಾದಿಂದ ಮಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗಿ ಆಗುವವರಿಗೆ ಸ್ಥಳಾವಕಾಶ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಬೆದರಿಕೆ ತಂತ್ರಗಳಿಗೆ ನಾವು ಹೆದರೋದಿಲ್ಲ. ನೀವು ಕಲ್ಯಾಣ ಮಂಟಪದ ಮಾಲೀಕರಿಗೆ ಬೆದರಿಕೆ ಪತ್ರ ನೀಡಿ ಏನೂ ಮಾಡೋಕಾಗಲ್ಲ. ನಾವು ನಮ್ಮ ಕಾರ್ಯಕರ್ತರ ಮನೆಯಲ್ಲಿ ಪ್ರತಿಭಟನಾಕಾರರನ್ನು ಉಳಿಸುತ್ತೆವೆ. ಪ್ರಜಾ ತಾಂತ್ರಿಕವಾಗಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ನೀವು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದಾಗ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿರಲಿಲ್ಲವೇ? ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದೀರಾ ಅಂತ ಕಿಡಿಕಾರಿದ್ದಾರೆ.
ಹಿಂದೂ ಮುಖಂಡರುಗಳ ಕೊಲೆಗೆ ಕಾರಣವಾದ ಕೆಎಫ್ ಡಿ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧ ಮಾಡಿ. ಕಾನೂನು ರೀತಿಯಲ್ಲಿ ನೀವೇ ಆ ಸಂಘಟನೆಗಳನ್ನು ನಿಷೇಧ ಮಾಡಿದ್ದರೆ ನಾವು ಬೈಕ್ ಜಾಥಾವನ್ನು ಮಾಡುತ್ತಿರಲಿಲ್ಲ. ಕೆಎಫ್ ಡಿ, ಪಿಎಫ್ಐ ಸಂಘಟನೆಗಳ ಮೇಲೆ ಯಾಕೆ ನಿಮಗೆ ಅಷ್ಟೊಂದು ಪ್ರೀತಿ. ಕಾನೂನು ಸುವ್ಯವಸ್ಥೆಯನ್ನು ಹಿಂದೂ ಮುಖಂಡರು ಆರ್ ಎಸ್ಎಸ್ ನವರು ಮಾತ್ರ ಹಾಳು ಮಾಡುತ್ತಾರೆ. ನಿಮ್ಮ ಯಾವುದೇ ಬೆದರಿಕೆಗಳಿಗೆ ನಾವು ಜಗ್ಗಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಅಂತ ಸ್ಪಷ್ಟಪಡಿಸಿದ್ರು.
ಇದನ್ನೂ ಓದಿ: ಮಂಗಳೂರು ಚಲೋ ರ್ಯಾಲಿಗೆ ಪೊಲೀಸರ ನೋಟಿಸ್
ಸಿಎಂ ಏಕವಚನಕ್ಕೆ ಪ್ರತಾಪ್ ಸಿಂಹ ಕಿಡಿ:
ಮೈಸೂರು ಮಹಾರಾಜರ ಕುರಿತು ಸಿಎಂ ಸಿದ್ದರಾಮಯ್ಯ ಹಗುರವಾಗಿ ಹೇಳಿಕೆ ನೀಡಿದ್ದರ ಬಗ್ಗೆ ಶನಿವಾರ ಮೈಸೂರು ಸಂಸದ ಪ್ರತಾಪ್ ಸಿಂಹ ಕಟುವಾಗಿ ತಿರುಗೇಟು ನೀಡಿದ್ದಾರೆ. ಮಹಾರಾಜರನ್ನು ಏಕವಚನದಲ್ಲಿ ಸಂಬೋಧಿಸಿದ್ದು ನಿಮ್ಮ ನೀಚ ಬುದ್ಧಿಯನ್ನು ತೋರುತ್ತದೆ. ಮಹಾರಾಜ ಜನರ ದುಡ್ಡಲ್ಲಿ ಮಾರ್ಕೆಟ್ ಕಟ್ಟಿದ್ದ ಎಂದು ಪ್ರಶ್ನೆ ಮಾಡುವ ನೀವು ಮೊದಲು ನಿಮ್ಮನ್ನ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಇಂದಿರಾ ಕ್ಯಾಂಟೀನ್ ಗೆ ಇಂದಿರಾಗಾಂಧಿ ಕುಟುಂಬ ದುಡ್ಡು ಕೊಟ್ಟಿದ್ದಾರಾ? ಅಕ್ಕಿ ಹಾಗೂ ಉಪ್ಪಿನ ಪ್ಯಾಕ್ ಮೇಲೆ ನಿಮ್ಮ ಫೋಟೋ ಹಾಕಿಕೊಳ್ಳಲು ಅದಕ್ಕೆ ನಿಮ್ಮ ಸ್ವಂತ ದುಡ್ಡು ಕೊಟ್ಟಿದ್ದೀರಾ? ಮಹಾರಾಜರು ಕಟ್ಟಿಸಿದ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ನಿಮಗೆ ಅವರ ಬಗ್ಗೆ ಕನಿಷ್ಠ ಕೃತಜ್ಞತೆಯ ಇಲ್ಲವೇ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.
ಮಹಾರಾಜರನ್ನು ಏಕವಚನದಲ್ಲಿ ಸಂಬೋಧಿಸಿದ ನಿಮಗೆ ಅವರು ನಿರ್ಮಿಸಿದ ರಸ್ತೆಗಳಿಗೆ ಡಾಂಬರ್ ಹಾಕುವ ಶಕ್ತಿ ಇಲ್ಲ ಅಂತ ಟೀಕಿಸಿದ್ರು. ನಿಮಗೆ ಮೈಸೂರು ರಾಜಮನೆತನದ ಕುಟುಂಬದ ಬಗ್ಗೆ ಗೌರವ ಇಲ್ಲ ಅಂತ ನಮಗೆ ಎಂದೋ ತಿಳಿದಿದೆ. ಮಹಾರಾಜರ ಪತನಕ್ಕೆ ಕಾರಣವಾದ ಟಿಪ್ಪು ಜಯಂತಿ ಆಚರಿಸುವ ನಿಮ್ಮ ಬುದ್ಧಿ ಏನೆಂದು ನಮಗೆ ಗೊತ್ತಿದೆ. ಬೇರೆಯವರನ್ನು ಪ್ರಶ್ನೆ ಮಾಡುವ ಮುನ್ನ ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.