ಮೈಸೂರು: ಐತಿಹಾಸಿಕ ನಾಡ ಹಬ್ಬ ದಸರಾಗೆ ನಾಡಿನ ಜನತೆ ಸಿದ್ಧರಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಯದುವಂಶದ ಕುಡಿ ಆದ್ಯವೀರ್ ನರಸಿಂಹರಾಜ ಒಡೆಯರ್ ಭಾಗಿಯಾಗುತ್ತಿರುವುದು ಖುಷಿ ತಂದಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್, ಈ ಬಾರಿಯ ದಸರಾದಲ್ಲಿ ಮಗ ಆದ್ಯವೀರ್ ಭಾಗಿಯಾಗುತ್ತಿರುವುದು ಸಂತಸದ ವಿಚಾರ. ನಮ್ಮ ಕುಟಂಬದ ಮತ್ತೊಬ್ಬ ಸದಸ್ಯ ಹಲವು ವರ್ಷಗಳ ನಂತರ ಪಾಲ್ಗೊಳ್ಳುತ್ತಿರುವುದು ಸಂತಸ ಇಮ್ಮಡಿಗೊಳಿಸಿದೆ. ದಸರಾದ ಸಿದ್ಧತೆಯಲ್ಲಿ ತೊಡಗಿಕೊಂಡಿರುವುದರಿಂದ ಆದ್ಯವೀರ್ರನ್ನು ಗಮನಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.
ಅಕ್ಟೋಬರ್ 10 ರಿಂದ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ವಿಜಯ ದಶಮಿ 19ಕ್ಕೆ ನಿಗಧಿಯಾಗಿದೆ. ಪ್ರತಿ ವರ್ಷದಂತೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೇ ದಸರಾ ಕಾರ್ಯಕ್ರಮಗಳು ಈಗಾಗಲೇ ಚುರುಕುಗೊಂಡಿವೆ ಎಂದು ತಿಳಿಸಿದರು. ಇದನ್ನೂ ಓದಿ: ಮೊದಲ ದಸರಾಗೆ ಸಜ್ಜಾದ ಆದ್ಯವೀರ್ – ಈಗ ಅರಮನೆ ಒಡೆಯರ್ ಹೀಗಿದ್ದಾರೆ
ಆದ್ಯವೀರ್ ಒಡೆಯರ್ ಅವರು 2017ರ ಡಿಸೆಂಬರ್ 6 ರಲ್ಲಿ ಜನಿಸಿದ್ದರು. ಆದ್ದರಿಂದ ಆದ್ಯವೀರ್ ಗೆ ಇದೇ ಮೊದಲ ದಸರವಾಗಿದೆ. ಈ ಬಾರಿಯ ದಸರಾ ವಿಶೇಷವಾಗಿದೆ. ಏಕೆಂದರೆ ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನವೇ ಇರಲಿಲ್ಲ. ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಆದ್ಯವೀರ್ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು. ಈ ಸಂತಸವನ್ನು ಇಡೀ ನಾಡಿನ ಜನತೆಯೂ ಸಂಭ್ರಮಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv