ತಿರುವನಂತಪುರಂ: ವಯನಾಡು ಜಲ ಪ್ರಳಯಕ್ಕೆ (Wayanad Landslides) ಅರಣ್ಯ ನಾಶ, ಅಕ್ರಮ ರೆಸಾರ್ಟ್ಗಳು ಕಾರಣ ಎಂದು ವಿಜ್ಞಾನಿಗಳು ತಿಳಿಸುತ್ತಿದ್ದರೂ ಈ ಅಂಶಗಳಿಗೆ ಪುಷ್ಟಿ ನೀಡುವ ಹಲವಾರು ವಿಚಾರಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.
ಭೂಕುಸಿತ ಸಂಭವಿಸಿದ ಮೆಪ್ಪಾಡಿ (Meppadi) ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅಂದಾಜು 380 ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸ್ಥಳೀಯ ಸಂಸ್ಥೆಯಿಂದ ನೋಂದಾಯಿಸಲ್ಪಟ್ಟ ವಸತಿ ಮತ್ತು ವಸತಿಯೇತರ ಕಟ್ಟಡಗಳು ಸೇರಿದಂತೆ 380 ಕ್ಕೂ ಹೆಚ್ಚು ಕಟ್ಟಡಗಳು ಪ್ರತಿ ವರ್ಷ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿವೆ. ಇದನ್ನೂ ಓದಿ:ಮಹಿಳೆಗೆ ಮಳೆ ನೀರು ಎರಚಿ ಕಿರುಕುಳ; ಯುಪಿಯಲ್ಲಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ಅಮಾನತು
ಯಾವ ವರ್ಷ ಎಷ್ಟು?
ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ 2016-17 ರಲ್ಲಿ 385 ಹೊಸ ಕಟ್ಟಡಗಳು ತಲೆ ಎತ್ತಿದ್ದರೆ 2017-18ರ ಅವಧಿಯಲ್ಲಿ ಈ ಸಂಖ್ಯೆ 406ಕ್ಕೆ ಏರಿಕೆಯಾಗಿತ್ತು. 2018-19 ರ ಅವಧಿಯಲ್ಲಿ 338 ಆಗಿದ್ದರೆ 2019-20 ರಲ್ಲಿ 366 ಕಟ್ಟಡ ನಿರ್ಮಾಣವಾಗಿತ್ತು. ಕೋವಿಡ್ನಿಂದಾಗಿ 2020-21 ರಲ್ಲಿ ಈ ಸಂಖ್ಯೆ 225ಕ್ಕೆ ಇಳಿಕೆಯಾಗಿದ್ದರೆ 2021-22 ರಲ್ಲಿ ಇದು 431ಕ್ಕೆ ಏರಿಕೆಯಾಗಿತ್ತು.
ವಯನಾಡು ಜಿಲ್ಲೆಯಲ್ಲಿ 2016-17 ರಲ್ಲಿ10,471 ಹೊಸ ಕಟ್ಟಡಗಳು ನಿರ್ಮಾಣವಾಗಿದ್ದರೆ 2021-22 ರಲ್ಲಿ ಇದು 12,171ಕ್ಕೆ ಏರಿತ್ತು. ಈಗ ಸಿಕ್ಕಿರುವ ಮಾಹಿತಿ 2021-22 ವರೆಗೆ ಮಾತ್ರ. ಕಳೆದ ವರ್ಷ ಮತ್ತು ಈ ವರ್ಷದ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ:ಕ್ಷಿಪ್ರಗತಿಯ ಸೇತುವೆ ನಿರ್ಮಾಣ ಕಾರ್ಯಾಚರಣೆಯಲ್ಲಿ ಮಹಿಳಾ ಸೇನಾಧಿಕಾರಿಯ ಸಾಹಸಗಾಥೆ!
ವಯನಾಡು ಪ್ರಕೃತಿ ಸೌಂದರ್ಯದ ಬೀಡಾಗಿರುವ ಕಾರಣ ಪ್ರವಾಸೋದ್ಯಮ (Tourism) ದೊಡ್ಡ ಅದಾಯದ ಮೂಲ. ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ 44 ಅಕ್ರಮ ರೆಸಾರ್ಟ್ಗಳು (Illegal Resorts) ತಲೆ ಎತ್ತಿವೆ ಎಂದು ವರದಿ ತಿಳಿಸಿದೆ.
ಸೋಮವಾರವೂ ಮುಂಡಕ್ಕೈಗೆ (Mundakai) ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಹಿಂಬಾಲಿಸಿದ್ದ ಪಂಚಾಯತ್ ಅಧಿಕಾರಿಗಳು ಭಾರೀ ಮಳೆಯ ಕಾರಣ ನೀಡಿ ಬಲವಂತವಾಗಿ ವಾಪಸ್ ಕಳುಹಿಸಿದ್ದರು.
ಮುಂಡಕ್ಕೈನಲ್ಲಿ ಮೊದಲು ಕಾಡಾನೆಗಳು ಮತ್ತು ಇತರ ಕಾಡು ಪ್ರಾಣಿಗಳು ಸಂಚರಿಸುತ್ತಿದ್ದವು. ಆದರೆ ರೆಸಾರ್ಟ್ ನಡೆಸುವ ವ್ಯಕ್ತಿಗಳು ಪಟಾಕಿ ಸಿಡಿಸುವ ಮೂಲಕ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸುವ ಮೂಲಕ ಓಡಿಸುತ್ತಿದ್ದಾರೆ.
ಅಧ್ಯಯನಗಳ ಪ್ರಕಾರ 1950 ರವರೆಗೆ ವಯನಾಡು ಜಿಲ್ಲೆಯ 85% ಭಾಗ ಅರಣ್ಯ ವಾಪ್ತಿಯಲ್ಲಿತ್ತು. 2018ರ ವೇಳೆಗೆ 62% ಅರಣ್ಯ ನಾಶವಾಗಿದೆ. ಪ್ರವಾಸೋದ್ಯಮಕ್ಕೆ ಆದ್ಯತೆ ಮತ್ತು ಟೀ ತೋಟ ನಿರ್ಮಿಸಲು ಕಾಡಿನಲ್ಲಿದ್ದ ಮರಗಳನ್ನು ಕಡಿಯಲಾಗಿದೆ. ಪ್ರಶ್ನೆ ಮಾಡಿದರೆ ರೆಸಾರ್ಟ್ ಮಾಲೀಕರು ಬೆದರಿಕೆ ಒಡ್ಡುತ್ತಾರೆ ಎಂದು ವರದಿಯಾಗಿದೆ.