ವಯನಾಡು: ಭೀಕರ ಭೂಕುಸಿತಕ್ಕೆ (Wayanad Landslides) ವಯನಾಡು ನಲುಗಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈಗಾಗಲೇ ಒಟ್ಟು ಮೃತರ ಸಂಖ್ಯೆ 350ರ ಗಡಿ ದಾಟಿದೆ. ಸೇನಾ ಕಾರ್ಯಾಚರಣೆ 6ನೇ ದಿನವಾದ ಭಾನುವಾರಕ್ಕೆ ಕಾಲಿಟ್ಟಿದ್ದು, ಘಟನಾ ಸ್ಥಳಗಳಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ.
ಸೂಚಿಪ್ಪಾರ ಫಾಲ್ಸ್ನಲ್ಲಿ 11 ಶವ ಪತ್ತೆ:
ದುರಂತ ಸ್ಥಳದಲ್ಲಿ ಸೇನಾ ಕಾರ್ಯಾಚರಣೆ ವೇಳೆ ಕೇರಳದ ಸೂಚಿಪ್ಪಾರ ಫಾಲ್ಸ್ನಲ್ಲಿ (Soochipara Falls) 11 ಮೃತದೇಹಗಳು ಪತ್ತೆಯಾಗಿವೆ. ಮುಂಡಕ್ಕೈ ಹಾಗೂ ಚೂರುಲ್ಮಲದಿಂದ 5 ಕಿಮೀ ದೂರದಲ್ಲಿ ಫಾಲ್ಸ್ ಇದ್ದು, ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಸಿಲಿಂಡರ್, ಕುಕ್ಕರ್ ಸೇರಿ ಅನೇಕ ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿಕೊಂಡು ಬಂದಿವೆ. ಅಷ್ಟರ ಮಟ್ಟಿಗೆ ಅಂದು ರಾತ್ರಿ ನೀರು ಹರಿದಿದೆ. ಈ ಹಿನ್ನಲೆಯಲ್ಲಿ ಫಾಲ್ಸ್ ಅಕ್ಕಪಕ್ಕದಲ್ಲಿಯೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶಿರಾಡಿಘಾಟ್ ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ – ಕೇಂದ್ರಕ್ಕೆ ಮನವರಿಕೆ ಮಾಡುತ್ತೇವೆಂದ ಸಿಎಂ
30 ಶವ ಪತ್ತೆ ಹಚ್ಚಿರುವ `ಡಿಕ್ಸಿʼ
ಇನ್ನು ದುರಂತ ಸ್ಥಳ ಚೂರಲ್ಮಲ ಭಾಗದಲ್ಲಿ ಉತ್ತರ ಪ್ರದೇಶದ ಮೇರಠ್ನಿಂದ ಬಂದಿರುವ ಶ್ವಾನಗಳು ಮೃತದೇಹಗಳ ಹುಡುಕಾಟದಲ್ಲಿ ತೊಡಗಿವೆ. ಈಗಾಗಲೇ 30 ಶವಗಳನ್ನು ಪತ್ತೆ ಹಚ್ಚಿದ್ದು, ಡಿಕ್ಸಿ ಹೆಸರಿನ ಶ್ವಾನ ಇದಕ್ಕೆ ಎಕ್ಸ್ಪರ್ಟ್ ಆಗಿದೆ. ಈ ಮಧ್ಯೆ ಮುಂಡಕೈ ಗ್ರಾಮಕ್ಕೆ ನಟ ಹಾಗೂ ಸೇನಾಧಿಕಾರಿ ಮೋಹನ್ ಲಾಲ್ ಭೇಟಿ ನೀಡಿ ದುರಂತ ಸ್ಥಳ ವೀಕ್ಷಿಸಿದ್ದಾರೆ. ಇದನ್ನೂ ಓದಿ: ವಯನಾಡಿನಲ್ಲಿ ಸಾವಿನ ಸುರಿ`ಮಳೆ’ – ಗುರುತು ಸಿಗದಷ್ಟು ಛಿದ್ರಗೊಂಡಿರುವ ದೇಹಗಳು; ಶವಗಳ ಶೋಧಕ್ಕೆ ಶ್ವಾನಪಡೆ!