ಉಡುಪಿ: ಕರಾವಳಿಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಜೋರು ಮಳೆ ಅರಬ್ಬೀ ಸಮುದ್ರವನ್ನು ಬುಡಮೇಲು ಮಾಡುತ್ತಿದೆ. ಸಮುದ್ರ ತೀರದಲ್ಲಿ ರಕ್ಕಸ ಗಾತ್ರದ ಅಲೆಗಳು ಏಳುತ್ತಿದ್ದು, ಸಮುದ್ರ ತಟದ ಜನರು ಭಯಭೀತರಾಗಿದ್ದಾರೆ. ಕರಾವಳಿ ಕಡಲಿನ ಅಲೆಗೆ ಮೀನುಗಾರಿಕಾ ರಸ್ತೆಗಳೆಲ್ಲಾ ಕೊಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಉಡುಪಿಗೆ ಮೆಕ್ನು ಚಂಡಮಾರುತ ಎಫೆಕ್ಟ್ – 500ಮೀ. ದೂರದಿಂದ್ಲೇ ಅಬ್ಬರಿಸಿಕೊಂಡು ಅಪ್ಪಳಿಸುತ್ತಿವೆ ಅಲೆಗಳು
ಕಡಲ್ಕೊರೆತ ಕರಾವಳಿಗಿದು ಬೆಂಬಿಡದೆ ಕಾಡುವ ಸಮಸ್ಯೆಯಾಗಿದೆ. ಈ ಬಾರಿ ಮುಂಗಾರು ಆರಂಭವಾದ ಮೊದಲ ವಾರದಲ್ಲೇ ಸಮುದ್ರದಲ್ಲಿ ಕಡಲ್ಕೊರೆತ ಶುರುವಾಗಿದೆ. ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಶೀರೂರುವರೆಗೆ ಅಲ್ಲಲ್ಲಿ ರಕ್ಕಸ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿದೆ. ಮಲ್ಪೆಯ ಪಡುಕೆರೆ ವ್ಯಾಪ್ತಿಯಲ್ಲಿ ತೀವ್ರ ಕಡಲ್ಕೊರೆತವಾಗುತ್ತಿದೆ. ಇದನ್ನೂ ಓದಿ: ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ
ಈ ಭಾಗದಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಪಡುಕೆರೆ ಸಿಕ್ಕಾಪಟ್ಟೆ ಡೇಂಜರಸ್. ಇಲ್ಲಿ ಒಂದು ಕಡೆಯಿಂದ ನದಿ, ಇನ್ನೊಂದು ಕಡೆಯಿಂದ ಸಮುದ್ರ, ಇವೆರಡರ ನಡುವೆ ಜನ ವಾಸಿಸಬೇಕು. ಈ ನಡುವೆ ಸಾವಿರಾರು ತೆಂಗಿನ ಮರಗಳು ಗಾಳಿಯ ರಭಸಕ್ಕೆ ನಲುಗಿಹೋಗಿದೆ.
ಕೇರಳ, ಗೋವಾ- ಮಹಾರಾಷ್ಟ್ರದಲ್ಲಿ ಸಮುದ್ರದ ಅಬ್ಬರಕ್ಕೆ ಅಲ್ಲಿನ ಸರ್ಕಾರಗಳು ಲಗಾಮು ಹಾಕಿದೆ. ಆದರೆ ಇಲ್ಲಿ ಕಡಲ್ಕೊರೆತ ಸಾಂಪ್ರದಾಯಿಕ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.