ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡಬಿದಿರೆ (Mudbidri) ಬಳಿಯ ಎರುಗುಂಡಿ ಫಾಲ್ಸ್ನಲ್ಲಿ (Erugundi Falls) ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಸ್ಥಳೀಯರ ಮಾತು ಕೇಳದೆ ತುಂಬಿ ಹರಿಯುತ್ತಿರುವ ಫಾಲ್ಸ್ನ ಮೇಲೆ ಐವರು ಪ್ರವಾಸಿಗರು ತೆರಳಿದ್ದರು. ಈ ವೇಳೆ ಏಕಾಏಕಿ ನೀರು ನುಗ್ಗಿದೆ. ಇದರಿಂದ ಐವರು ಬಂಡೆಗಳ ನಡುವೆ ಸಿಲುಕಿದ್ದಾರೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದ್ದ ಐವರನ್ನು ಸ್ಥಳೀಯರು ರೋಪ್ ಹಾಕಿ ರಕ್ಷಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಐವರ ಜೀವ ಉಳಿದಂತಾಗಿದೆ. ಇದನ್ನೂ ಓದಿ: ರಾಜ್ಯದ 6 ಜಿಲ್ಲೆಗಳಿಗೆ 5 ದಿನ ರೆಡ್ ಅಲರ್ಟ್, ಎಲ್ಲಿ ಅತಿಹೆಚ್ಚು ಮಳೆ?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಗೆ ಗ್ರಾಮದಲ್ಲಿ ಎರುಗುಂಡಿ ಫಾಲ್ಸ್ ಇದೆ. ಮುಂಗಾರು ಮಳೆಯ ಅಬ್ಬರಕ್ಕೆ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಇನ್ನೂ ರಕ್ಷಣೆಗೊಳಗಾದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಐದು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಭಾಗಗಳಲ್ಲಿ ಜನ ಸುರಕ್ಷತೆಯಿಂದ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಬೆಳಗಾವಿ | ಭಾರೀ ಮಳೆಗೆ ಮನೆ ಗೋಡೆ ಕುಸಿತ – ಮೂರು ವರ್ಷದ ಮಗು ದುರ್ಮರಣ