ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಎರಡು ವರ್ಷದ ನಂತರ ಕೆಆರ್ಎಸ್ ಅಣೆಕಟ್ಟೆಯಲ್ಲಿ ನೂರ ಹತ್ತು (110) ಅಡಿ ನೀರಿನ ಸಂಗ್ರಹವಾಗಿದೆ.
ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಅಣೆಕಟ್ಟೆಗೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ನೀರು ಹರಿದು ಬರುತ್ತಿದೆ. ಇದರಿಂದ ನೀರಿನ ಮಟ್ಟ 110 ಅಡಿ ದಾಟಿದೆ. ಕೆಆರ್ಎಸ್ ಸುಮಾರು 124.80 ಅಡಿ ನೀರಿನ ಸಾಮರ್ಥ್ಯವನ್ನು ಹೊಂದಿದೆ. ಮಳೆ ಇಲ್ಲದ ಕಾರಣ ಡ್ಯಾಂನಲ್ಲಿ ಕಳೆದ ವರ್ಷ 99.65 ಅಡಿ ನೀರು ಮಾತ್ರ ಸಂಗ್ರಹವಾಗಿತ್ತು. ಅಂದು ಅದೇ ಗರಿಷ್ಠವಾದ ನೀರಿನ ಮಟ್ಟವಾಗಿತ್ತು.
2015 ರಲ್ಲಿ 111 ಅಡಿ ಗರಿಷ್ಠ ನೀರಿನ ಸಂಗ್ರಹವಾಗಿತ್ತು. ಆದರೆ ಕಳೆದ 2 ವರ್ಷಗಳಿಂದ ನೀರಿನ ಮಟ್ಟ ತುಂಬಾ ಕಡಿಮೆಯಾಗಿತ್ತು. ಈ ಬಾರಿ ವರುಣ ಸ್ವಲ್ಪ ಕೃಪೆ ತೋರಿದ್ದು, ಇದರಿಂದ ಡ್ಯಾಂನಲ್ಲಿ ಸುಮಾರು 110.15 ಅಡಿ ನೀರಿನ ಸಂಗ್ರಹವಾಗಿದೆ.
ಡ್ಯಾಂಗೆ ಸುಮಾರು 5671 ಕ್ಯೂಸೆಕ್ ನೀರು ಒಳಹರಿದು ಬರುತ್ತಿದೆ. ಅದೇ ರೀತಿ 2577 ಕ್ಯೂಸೆಕ್ ನೀರು ಡ್ಯಾಂನಿಂದ ಹೊರಬಿಡಲಾಗುತ್ತಿದೆ. ಡ್ಯಾಂ ನೀರಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತಿರುವುದಕ್ಕೆ ಜನರು ಹರ್ಷಗೊಂಡಿದ್ದಾರೆ. ಜೊತೆಗೆ ಮುಂದಿನ ಬೇಸಿಗೆಯಲ್ಲಿ ಬೆಳೆಗೆ ನೀರು ಬಿಡಬಹುದೆಂಬ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿದ್ದಾರೆ.