ದಾವಣಗೆರೆ: ಜಿಲ್ಲೆಯ ಕೊನೆ ಭಾಗದ ರೈತರಿಗೆ ನೀರು ಬಿಡದೆ ಸಚಿವ ಪಿ.ಟಿ ಪರಮೇಶ್ವರ್ ತಮ್ಮ ಸ್ವಗ್ರಾಮಕ್ಕೆ ನೀರು ಬಿಡಿಸಿಕೊಳ್ಳಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನೊಂದ ರೈತರು ಆರೋಪ ಮಾಡುತ್ತಿದ್ದಾರೆ.
ಮುಜರಾಯಿ ಸಚಿವ ಪಿ.ಟಿ ಪರಮೇಶ್ವರ್ ಸ್ವಗ್ರಾಮ ಹರಪ್ಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡವಾಗಿದ್ದು, ಭದ್ರ ನದಿಯ ನೀರನ್ನು ಅಧಿಕಾರಿಗಳ ಮೇಲೆ ದೌರ್ಜನ್ಯ ಹಾಗೂ ಒತ್ತಡ ಹೇರಿ ನೀರನ್ನು ತಮ್ಮ ಸ್ವಗ್ರಾಮಕ್ಕೆ ಬಿಡಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ಸಚಿವ ಪಿಟಿ ಪರಮೇಶ್ವರ್ ಸ್ವಗ್ರಾಮಕ್ಕೆ ಭದ್ರ ನೀರು ಹೋಗುತ್ತಿವೆ. ಆದರೆ ಜಿಲ್ಲೆಯ ಪಕ್ಕದಲ್ಲೇ ಇರುವ ಹತ್ತಾರು ಗ್ರಾಮಕ್ಕೆ ನೀರಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಭದ್ರ ನೀರಿಲ್ಲದೇ ಭತ್ತ ಬೆಳೆಯುವುದು ಸಹ ಕಷ್ಟವಾಗಿದೆ. ಕೊನೆಗೆ ನಾಟಿ ಮಾಡಿರುವ ಬೆಳೆಯನ್ನಾದರೂ ಉಳಿಸಿಕೊಳ್ಳಲು ಆಗುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿ ರಸ್ತೆ ತಡೆದು ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಸಚಿವರ ದೌರ್ಜನ್ಯಕ್ಕೆ ರೈತರು ಬೆಳೆಗೆ ನೀರಿಲ್ಲದೆ ಪರದಾಡುವಂತ ಪರಿಸ್ಥಿತಿ ಎದುರಾಗಿದೆ ಎಂದು ರೈತ ಕಲಿಂಗಪ್ಪ ಹೇಳಿದ್ದಾರೆ.
ಸಚಿವರಾದವರು ರಾಜ್ಯದ ಎಲ್ಲ ರೈತರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಸ್ವಗ್ರಾಮದ ಮೇಲಿರುವ ಪ್ರೀತಿಯಿಂದ ಈ ರೀತಿ ಮಾಡುತ್ತಿದ್ದಾರೆ. ಕೊನೆ ಭಾಗದ ರೈತರಿಗೆ ಬಗ್ಗೆ ಸ್ವಲ್ಪ ಯೋಚಿಸಬೇಕು ಎಂದು ತಮ್ಮ ನೋವು ಹೇಳಿಕೊಂಡಿದ್ದಾರೆ.