ರಾಯಚೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸರಬರಾಜಿನ ಸಮರ್ಪಕ ವ್ಯವಸ್ಥೆಗಾಗಿ ಜಿಲ್ಲಾ ಪಂಚಾಯ್ತಿ ವಾಟರ್ ಅಂಬ್ಯುಲೆನ್ಸ್ ಸೇವೆಯನ್ನ ಆರಂಭಿಸಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗದಂತೆ ನೀರು ಪೂರೈಕೆಗೆ ಸಂಬಂಧಿಸಿದ ಕೊಳವೆ ಜಾಲದ ವ್ಯವಸ್ಥೆ, ಕೈಪಂಪು, ಕೊಳವೆ ಬಾಯಿ ಪಂಪು ತುರ್ತು ದುರಸ್ಥಿ, ಆರ್ಓ ಪ್ಲಾಂಟ್ಗಳ ದುರಸ್ಥಿಗೆ ಅಂಬ್ಯುಲೆನ್ಸ್ ಸಜ್ಜುಗೊಂಡಿದೆ.
ನೀರಿನ ತುರ್ತು ಸೇವಾ ವಾಹನದಲ್ಲಿ ನುರಿತ ನಾಲ್ಕು ಜನ ತಂತ್ರಜ್ಞರು ಹಾಗೂ ಅಗತ್ಯ ಸಲಕರಣೆಗಳು ಇದ್ದು ಎಲ್ಲಾ ಗ್ರಾಮ ಪಂಚಾಯ್ತಿಗಳು ಸೇವೆಯ ಸೌಲಭ್ಯ ಪಡೆಯಬಹುದಾಗಿದೆ. ಸದ್ಯಕ್ಕೆ ಜಿಲ್ಲೆಗೆ ಒಂದು ಅಂಬ್ಯುಲೆನ್ಸ್ ಸೇವೆಯನ್ನ ಮಾತ್ರ ಆರಂಭಿಸಲಾಗಿದೆ. ಜಿಲ್ಲಾಪಂಚಾಯ್ತಿ ವಶಕ್ಕೆ ಪಡೆದಿರುವ 25 ಖಾಸಗಿ ಬೋರ್ವೆಲ್ಗಳ ತುರ್ತು ರಿಪೇರಿಯನ್ನೂ ತುರ್ತು ಸೇವಾ ತಂಡ ನಿರ್ವಹಿಸಲಿದೆ.
ತುರ್ತುಸೇವಾ ವಾಹನದಲ್ಲಿ ಶುದ್ದ ಕುಡಿಯುವ ನೀರಿನ ತಂತ್ರಜ್ಞ, ಕೈಪಂಪು,ಕೊಳವೆ ಬಾವಿ ರಿಪೇರಿ ತಜ್ಞ ಹಾಗೂ ಎಲೆಕ್ಟ್ರೀಷಿಯನ್ ತಂಡ ಇರುತ್ತದೆ. ಜಿಲ್ಲೆಯಲ್ಲಿನ 473 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 328 ಮಾತ್ರ ಕೆಲಸ ಮಾಡುತ್ತಿದ್ದು, ಇದರಲ್ಲಿ 65 ಘಟಕಗಳು ಸಂಪೂರ್ಣ ಬಂದ್ ಆಗಿವೆ. ಶೀಘ್ರದಲ್ಲಿ ರೀಪೇರಿ ಆಗುವಂತಹ ಘಟಕಗಳನ್ನ ಸಾರ್ವಜನಿಕರಿಗೆ ಮುಕ್ತ ಮಾಡಲು ತುರ್ತು ಸೇವಾ ಘಟಕ ಕಾರ್ಯನಿರ್ವಹಿಸಲಿದೆ ಅಂತ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಯೂಸೂಫ್ ಖಾನ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ್ದಾರೆ.