ತಿರುವನಂತಪುರಂ: ಬಸ್ ಅಡಿ ಸಿಲುಕಿದ್ದ ಸ್ಕೂಟಿ ಸವಾರ ಪವಾಡ ರೀತಿ ಬದುಕುಳಿದ ಘಟನೆ ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ನಡೆದಿದೆ.
ಕೋಝಿಕೋಡ್ ಜಿಲ್ಲೆಯ ಎಂಗಾಪುಝ ಪಟ್ಟಣದಲ್ಲಿ ಸೋಮವಾರ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿದ್ದು, ಅನೇಕ ಬೈಕ್ಗಳು ಜಖಂಗೊಂಡಿವೆ. ಈ ದೃಶ್ಯವು ಸ್ಥಳದಲ್ಲಿದ್ದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH Man has narrow escape after a private bus hit him yesterday, in Kozhikode district‘s Engapuzha. #Kerala (source: CCTV footage) pic.twitter.com/YAgf8vOg66
— ANI (@ANI) September 17, 2019
ಹ್ಯಾಪಿ ಟಾಪ್ ಎಂಬ ಹೆಸರಿನ ಖಾಸಗಿ ಬಸ್ ಎಂಗಾಪುಝ ಪಟ್ಟಣದ ಬಸ್ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಹೊರಟಿತ್ತು. ಈ ವೇಳೆ ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಗೆ ನಿಂದಿದ್ದ ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಸ್ಕೂಟಿಗೆ ಗುದ್ದಿದ ಪರಿಣಾಮ ಸವಾರ ಬಸ್ನ ಅಡಿ ಸಿಲುಕಿ, ಸಾವು ಬದುಕಿನ ಮಧ್ಯೆ ಹೋರಾಡುತ್ತಾ ಸ್ವಲ್ಪದ ದೂರವರೆಗೆ ಬಂದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಬಸ್ ನಿಲ್ಲಿಸುವಂತೆ ಚಾಲಕನಿಗೆ ತಿಳಿಸಿದ್ದಾರೆ. ಬಸ್ ನಿಲ್ಲುತ್ತಿದ್ದಂತೆ ಸವಾರನನ್ನು ರಕ್ಷಣೆ ಮಾಡಿದ್ದಾರೆ.
ಅದೃಷ್ಟವಶಾತ್ ಬಸ್ ಅಡಿ ಸಿಲುಕಿದ್ದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಘಟನೆಯಿಂದಾಗಿ ಭಯಗೊಂಡಿದ್ದ ಅವರು ಸ್ಕೂಟಿಯನ್ನು ರಸ್ತೆಯಲ್ಲಿ ಬಿಟ್ಟು ಅಂಗಡಿಯೊಂದರ ಮುಂದೆ ಬಂದು ನಿಂತರು. ಈ ದೃಶ್ಯವು ಸ್ಥಳದಲ್ಲಿದ್ದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.