ಕ್ರಿಕೆಟ್‍ನಿಂದ 30 ಲಕ್ಷ ದುಡಿಯಬೇಕೆಂದಿದ್ದ ಎಂಎಸ್‍ಡಿ – ಜಾಫರ್ ಬಿಚ್ಚಿಟ್ಟ ಧೋನಿ ಕಥೆ

Public TV
2 Min Read
MS DHONI JAFER

– ರಾಂಚಿಯಲ್ಲಿ ಶಾಂತಿಯುತ ಜೀವನ ಮಾಡಲು ಬಯಸಿದ್ದ ಕ್ಯಾಪ್ಟನ್ ಕೂಲ್

ನವದೆಹಲಿ: ಇಂದು ಕ್ರಿಕೆಟ್ ಜಗತ್ತಿನ ಶ್ರೀಮಂತ ಆಟಗಾರನಾಗಿರುವ ಧೋನಿ ಅವರು, ಅದೊಂದು ದಿನ ಕ್ರಿಕೆಟ್ ಆಡಿ ಕೇವಲ 30 ಲಕ್ಷ ದುಡಿಯಬೇಕು ಎಂಬ ಆಸೆಯನ್ನು ಹೊಂದಿದ್ದರು ಎಂದು ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ತಿಳಿಸಿದ್ದಾರೆ.

ಎಂಎಸ್ ಧೋನಿ ಸುಮಾರು ಎಂಟು ತಿಂಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ದೂರವಿದ್ದರೂ, ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿ ಮುಂದುವರೆದಿದ್ದಾರೆ. ಕ್ಯಾಪ್ಟನ್ ಕೂಲ್ ಆಗಿ ಮಿಂಚಿ ಭಾರತಕ್ಕೆ ಮೂರು ಐಸಿಸಿ ಪ್ರಶಸ್ತಿ ತಂದು ಕೊಟ್ಟಿದ್ದ ಧೋನಿ, ಒಂದು ಕಾಲದಲ್ಲಿ ಕ್ರಿಕೆಟ್ ಆಡಿ 30 ಲಕ್ಷ ಸಂಪಾದಿಸಿ ರಾಂಚಿಯಲ್ಲಿ ಶಾಂತಿಯುತ ಜೀವನ ಮಾಡಲು ಬಯಸಿದ್ದರು ಎಂದು ಜಾಫರ್ ಟ್ವೀಟ್ ಮಾಡಿದ್ದಾರೆ.

Wasim Jaffer Bats for MS Dhoni’s Return

ಕೊರೊನಾದಿಂದ ದೇಶ ಲಾಕ್‍ಡೌನ್ ಆಗಿದ್ದು, 60 ವರ್ಷದ ಬಳಿಕ ಕ್ರಿಕೆಟ್ ತನ್ನ ಎಲ್ಲಾ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಕ್ರಿಕೆಟ್‍ನಿಂದ ಬ್ರೇಕ್ ಪಡೆದ ಆಟಗಾರರು ಮನೆಯಲ್ಲೇ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹಾಗೇಯೆ ಮನೆಯಲ್ಲೇ ಕುಳಿತಿರುವ ವಾಸಿಮ್ ಜಾಫರ್ ಅವರು, ಒಂದು ಟ್ವೀಟ್ ಮಾಡಿದ್ದು, ಹೆಲೋ ಗೆಳೆಯರೇ ಇಂದು ನೀವು ನನ್ನನ್ನು ಏನಾದರೂ ಪ್ರಶ್ನೆ ಕೇಳಲು ಬಯಸಿದ್ದರೆ ಕೇಳಬಹುದು ನಾನು ಅದಕ್ಕೆ ಪ್ರಾಮಾಣಿಕ ಉತ್ತರ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಕೆಲವರು, ನಿಮ್ಮ ಬಾಲ್ಯದ ನೆಚ್ಚಿನ ನಾಯಕ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಜಾಫರ್ ನನ್ನ ಬಾಲ್ಯದ ನೆಚ್ಚಿನ ನಾಯಕ ಸಚಿನ್ ತೆಂಡೂಲ್ಕರ್ ಎಂದು ಹೇಳಿದ್ದಾರೆ. ಹಾಗೂ ಕೊಹ್ಲಿ, ಸ್ಮಿತ್ ಮತ್ತು ರೂಟ್ ಈ ಮೂವರಲ್ಲಿ ನನಗೆ ಕೊಹ್ಲಿ ಇಷ್ಟ ಎಂದು ಕೂಡ ಹೇಳಿದ್ದಾರೆ. ಇದರ ನಡುವೆ ಧೋನಿ ಅಭಿಮಾನಿಯೊಬ್ಬ ಧೋನಿ ಅವರ ಜೊತೆಗಿನ ನಿಮ್ಮ ನೆನಪನ್ನು ನಮ್ಮ ಜೊತೆ ಹಂಚಿಕೊಳ್ಳಿ ಎಂದು ಹೇಳಿದ್ದಾನೆ.

ಧೋನಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಜಾಫರ್, ಧೋನಿ ಅವರು ಅಂತರಾಷ್ಟ್ರೀಯ ಭಾರತ ತಂಡವನ್ನು ಸೇರಿದ ಮೊದಲ ವರ್ಷವೋ ಅಥವಾ ಎರಡನೇ ವರ್ಷವೋ, ಅವರು ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ. ಅವರು ಕ್ರಿಕೆಟ್ ಆಡಿ 30 ಲಕ್ಷವನ್ನು ಗಳಿಸಿ ರಾಂಚಿಯಲ್ಲಿ ಶಾಂತಿಯುತ ಜೀವನ ಮಾಡಲು ಅವರು ಬಯಸಿದ್ದರು ಎಂದು ಉತ್ತರಿಸಿದ್ದಾರೆ. ಈ ಮೂಲಕ ಧೋನಿಯವರ ಹಳೇಯ ಆಸೆಯೊಂದನ್ನು ತೆರೆದಿಟ್ಟಿದ್ದಾರೆ.

ಕೊನೆಯದಾಗಿ 2019ರ ಜುಲೈನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಪರ ಆಡಿದ್ದ ಧೋನಿ, ಮಾರ್ಚ್ 29ರಂದು ಪ್ರಾರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯಲ್ಲಿ ಮತ್ತೆ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡಬೇಕಿತ್ತು. ಇದಕ್ಕಾಗಿ ತರಬೇತಿಯನ್ನು ಸಹ ಧೋನಿ ಅವರು ಶುರು ಮಾಡಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದ ಐಪಿಎಲ್ ಮುಂದೂಡಲಾಗಿದೆ.
MS Dhoni

ವಿಶ್ವಕಪ್ ಸೈಮಿಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿ, ನಂತರ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿದ್ದರು. ಇದಾದ ನಂತರ ಅವರು ಚೆನ್ನೈಗೆ ಬಂದು ಐಪಿಎಲ್‍ಗಾಗಿ ರೈನಾ ಜೊತೆಗೂಡಿ ಅಭ್ಯಾಸವನ್ನು ಆರಂಭಿಸಿದ್ದರು. ಆದರೆ ಕೊರೊನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡಿದ ಕಾರಣ ಐಪಿಎಲ್ ಮುಂದಕ್ಕೆ ಹೋಗಿದೆ. ಈ ಮೂಲಕ ಐಪಿಎಲ್‍ನಲ್ಲಿ ಧೋನಿ ಬ್ಯಾಟಿಂಗ್ ನೋಡಲು ಬಯಸಿದ್ದ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *