ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ (Waqf Amendment Bill) ಕುರಿತ ಕರಡು ವರದಿಯನ್ನು ಜಂಟಿ ಸಂಸದೀಯ ಸಮಿತಿಯು ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರಿಗೆ ಸಲ್ಲಿಸಿದೆ.
ವಕ್ಫ್ ಮಸೂದೆ ಕುರಿತ ಸಂಸದೀಯ ಸಮಿತಿಯ ಅಧ್ಯಕ್ಷರಾದ ಜಗದಾಂಬಿಕಾ ಪಾಲ್ ಅವರು ಸಂಸತ್ ಭವನದ ಕಚೇರಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ವರದಿಯನ್ನು ಹಸ್ತಾಂತರಿಸಿದ್ದಾರೆ.
ಜಂಟಿ ಸಂಸದೀಯ ಸಮಿತಿಯು ನಿನ್ನೆ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಕರಡು ವರದಿಯನ್ನು ಅಂಗೀಕರಿಸಿದೆ. ಸಮಿತಿಯ 16 ಸದಸ್ಯರು ಕರಡು ಮಸೂದೆ ಪರವಾಗಿ ಮತ ಚಲಾಯಿಸಿದರೆ, 11 ಸದಸ್ಯರು ಮಸೂದೆಯ ವಿರೋಧವಾಗಿ ಮತವನ್ನು ಚಲಾಯಿಸಿದ್ದರು. ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ್ದರು. ಮಸೂದೆಯನ್ನು 2024ರ ಆಗಸ್ಟ್ 8ರಂದು ಜಂಟಿ ಸಂಸದೀಯ ಸಮಿತಿಗೆ(Waqf JPC) ಉಲ್ಲೇಖಿಸಲಾಗಿತ್ತು.
ಇನ್ನೂ ಞ ಬಗ್ಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, 1995ರ ವಕ್ಫ್ ಕಾಯ್ದೆಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳು ದೇಶಾದ್ಯಂತ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವೃತ್ತಿಪರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಇದನ್ನ ಐತಿಹಾಸಿಕ ಹೆಜ್ಜೆ ಎಂದು ಕರೆದ ಸೂರ್ಯ, ಜೆಪಿಸಿ ತನ್ನ ವರದಿಯನ್ನು ಅಂತಿಮಗೊಳಿಸುವ ಮೊದಲು ಪಾಲುದಾರರು ಮತ್ತು ಸಾರ್ವಜನಿಕರೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ಕೈಗೊಂಡಿದೆ ಎಂದು ಹೇಳಿದರು.
ವಕ್ಫ್ ಆಸ್ತಿಗಳನ್ನು ದೀರ್ಘಕಾಲದವರೆಗೆ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಆಸ್ತಿಗಳ ವಂಚನೆ ಮತ್ತು ಅತಿಕ್ರಮಣದ ಹಲವಾರು ನಿದರ್ಶನಗಳು ಕಂಡುಬಂದಿವೆ, ಸರ್ಕಾರಿ ಭೂಮಿಗಳು, ಖಾಸಗಿ ಭೂಮಿಗಳು ಮತ್ತು ಕೃಷಿ ಭೂಮಿಗಳನ್ನು ಸಹ ವಕ್ಫ್ ಎಂದು ಹೇಳಿಕೊಳ್ಳಲಾಗುತ್ತಿದೆ. ಮಸೂದೆಯು ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ, ವಕ್ಫ್ ನಿರ್ವಹಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವೃತ್ತಿಪರತೆಯನ್ನು ತರುತ್ತದೆ. ತಿದ್ದುಪಡಿಗಳು ಮುಸ್ಲಿಂ ಸಮುದಾಯವನ್ನು ಸಬಲೀಕರಣಗೊಳಿಸುತ್ತವೆ. ಅದೇ ಸಮಯದಲ್ಲಿ ವಕ್ಫ್ ಕಾಯ್ದೆಯ ನಿಬಂಧನೆಗಳ ದುರುಪಯೋಗವನ್ನು ತಡೆಯುತ್ತವೆ ಎಂದು ಹೇಳಿದರು.