ಕೋಲ್ಕತ್ತಾ: ರಾಜಕೀಯ ಗಲಭೆಗಳ ಮೂಲಕ ಬಿಜೆಪಿ, ಬಂಗಾಳವನ್ನು ಗುಜರಾತ್ ಮಾಡಲು ಹೊರಟಿದೆ. ಆದರೆ, ನಾನು ಜೀವಂತವಾಗಿರುವವರೆಗೆ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಬಂಗಾಳದಲ್ಲಿ ಇರಲು ಬಯಸುವವರು ಬಂಗಾಳಿ ಭಾಷೆಯನ್ನು ಕಲಿಯಲೇ ಬೇಕು. ಬೇರೆ ಭಾಷೆಗಳಿಗೆ ಇಲ್ಲಿ ಆಸ್ಪದವಿಲ್ಲ ಎಂದು ಹಿಂದಿ ಹೇರಿಕೆ ಹಾಗೂ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.
ಪರಗಣ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ರಾಜಕೀಯ ಗಲಭೆ ಎಬ್ಬಿಸುವ ಮೂಲಕ ಬಂಗಾಳವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಇತ್ತೀಚೆಗೆ ವೈದ್ಯರ ಮುಷ್ಕರ ವಿಷಯದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
ದೆಹಲಿಗೆ ತೆರಳಿದಾಗ ಹಿಂದಿಯಲ್ಲಿ ಮಾತನಾಡುತ್ತೇವೆ. ಪಂಜಾಬ್ಗೆ ತೆರಳಿದಾಗ ಪಂಜಾಬಿ ಭಾಷೆ ಮಾತನಾಡುತ್ತೇವೆ. ತಮಿಳುನಾಡಿಗೆ ತೆರಳಿದಾಗ ತಮಿಳು ಮಾತನಾಡಲು ಬರದಿದ್ದರೂ ತಮಿಳು ಭಾಷೆಯ ನಾಲ್ಕು ಪದಗಳನ್ನಾದರೂ ಮಾತನಾಡುತ್ತೇನೆ. ಅದೇ ರೀತಿ ಬಂಗಾಳದಲ್ಲಿ ಬಂಗಾಳಿ ಭಾಷೆಯನ್ನೇ ಬಳಸಬೇಕು. ಈ ಮೂಲಕ ಬಂಗಾಳದಲ್ಲಿ ಬಂಗಾಳಿ ಭಾಷೆಯನ್ನು ಪ್ರಚಾರಪಡಿಸಬೇಕೆಂದು ತಿಳಿಸಿದ್ದಾರೆ.
ನೀವು ಬಂಗಾಳಕ್ಕೆ ಬರುವುದಾದರೆ ಬಂಗಾಳಿಯಲ್ಲೇ ಮಾತನಾಡಬೇಕು. ಹೊರ ರಾಜ್ಯ, ಹೊರ ದೇಶದಿಂದ ಬಂದು ಬಂಗಾಳಿಯವರ ಮೇಲೆ ದಬ್ಬಾಳಿಕೆ ನಡೆಸಲು ನಾನು ಬಿಡುವುದಿಲ್ಲ. ಡಿಎಂಕೆ ಮತ್ತು ಪಿಎಂಕೆ ಸೇರಿದಂತೆ ದಕ್ಷಿಣ ಭಾರತದ ರಾಜಕೀಯ ಪಕ್ಷಗಳು ಬಿಜೆಪಿಯ ಕನ್ನಡಿಗಳಿದ್ದಂತೆ. ಇತ್ತೀಚೆಗಷ್ಟೆ ರೈಲ್ವೆ ಇಲಾಖೆ ತಮಿಳುನಾಡಿನಲ್ಲಿ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಸಂವಹನ ನಡೆಸುವ ಕುರಿತು ಚರ್ಚೆ ನಡೆದಿತ್ತು. ಇದರಿಂದ ತಮಿಳು ಭಾಷೆಗೆ ಧಕ್ಕೆಯಾಗಲಿದೆ ಎಂಬ ಟೀಕೆಯೂ ಈ ವೇಳೆ ವ್ಯಕ್ತವಾಗಿತ್ತು.