ಕರಾಚಿ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೂತನ ನಿರ್ದೇಶಕರಾಗಿ ಆಯ್ಕೆ ಆಗಿರುವ ವಾಸೀಂ ಖಾನ್ ಪಾಕ್ ಆಟಗಾರರಾಗಿಗೆ ಐಪಿಎಲ್ ನಲ್ಲಿ ಆಡಲು ಅವಕಾಶ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೋರ್ಡ್ ನಿರ್ದೇಶಕರಾಗಿ ಆಯ್ಕೆ ಆದ ಬಳಿಕ ತಮ್ಮ ಮುಂದಿನ ಉದ್ದೇಶಗಳ ಬಗ್ಗೆ ಮಾತನಾಡಿರುವ ವಾಸೀಂ ಖಾನ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ನನ್ನ ಉದ್ದೇಶವಾಗಿದೆ. ಎರಡು ಕ್ರಿಕೆಟ್ ಮಂಡಳಿಗಳು ಉತ್ತಮ ಸಂಬಂಧ ಸಾಧಿಸುವುದು ಅಗತ್ಯವಾಗಿದ್ದು, ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಪಾಕ್ ಆಟಗಾರರಿಗೆ ಕೂಡ ಐಪಿಎಲ್ ಸ್ವಾಗತ ನೀಡಬೇಕು ಎಂದರು.
ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ವಿವಾದಗಳು ಕ್ರಿಕೆಟ್ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದು, ಎರಡು ರಾಷ್ಟ್ರಗಳ ಕ್ರಿಕೆಟ್ ಸಂಬಂಧ ಹಿಂದುಳಿಯಲು ಕಾರಣವಾಗಿದೆ. ಅದರಿಂದ ವಿವಾದಗಳನ್ನು ಬದಿಗೊತ್ತಿ ಕ್ರಿಕೆಟ್ಗೆ ಹೆಚ್ಚಿನ ಪ್ರಮುಖ್ಯತೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ 2008 ರಲ್ಲಿ ಪಾಕಿಸ್ತಾನ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸಿದ್ದರು, ಆದರೆ ಮುಂಬೈ ದಾಳಿ ನಡೆದ ಬಳಿಕ ಸಂಪೂರ್ಣವಾಗಿ ಪಾಕ್ ಆಟಗಾರರನ್ನು ಐಪಿಎಲ್ನಿಂದ ಕೈ ಬಿಡಲು ಭಾರತ ಸರ್ಕಾರ ನಿರ್ದೇಶಿಸಿತ್ತು. ಅಲ್ಲದೇ ಕೆಲ ದಿನಗಳ ಹಿಂದೆಯಷ್ಟೇ ದ್ವಿಪಕ್ಷೀಯ ಸರಣಿ ಆಡದ ಕಾರಣ ಬಿಸಿಸಿಐ ತಮಗೆ 70 ದಶಲಕ್ಷ ಡಾಲರ್ (ಅಂದಾಜು 471 ಕೋಟಿ ರೂ.) ಪರಿಹಾರ ನೀಡಬೇಕೆಂದು ಐಸಿಸಿಯಲ್ಲಿ ಪಾಕ್ ದಾಖಲಿಸಿದ್ದ ಪ್ರಕರಣವನ್ನು ಐಸಿಸಿ ವಜಾ ಮಾಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv