ಕಾರವಾರ: ಗೋಡೆ ಕುಸಿದು ಏಳು ಮಂದಿ ಗಾಯಗೊಂಡು ಅದರಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ತೃಪ್ತಿ ಹೋಟೆಲಿನಲ್ಲಿ ನಡೆದಿದೆ.
ಅಧಿಕ ಮಳೆಯಿಂದಾಗಿ ಗೋಡೆ ಬಿರುಕುಗೊಂಡಿದ್ದು, ಇದನ್ನು ಸರಿಪಡಿಸುತ್ತಿರುವ ವೇಳೆ ಕುಸಿದು ಬಿದ್ದಿದೆ. ಈ ವೇಳೆ ಪಕ್ಕದ ಹೋಟೆಲಿನಲ್ಲಿ ಊಟ ಮಾಡುತ್ತಿದ್ದ ಏಳು ಮಂದಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಜ್ಯೋತಿ ನಾಯ್ಕ್, ಪರಮೇಶ್ವರ್, ನಾಗೇಶ್ ವೆಂಕಟೇಶ ನಾಯ್ಕ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಮಳೆಯ ಆರ್ಭಟದಿಂದ ಕಾಳಿ ನದಿಯ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಂಡಿದ್ದು, ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕದ್ರಾ ಜಲಾಶಯದಿಂದ ಕಾಳಿ ನದಿಗೆ ಜಲಾಶಯದಿಂದ ನೀರು ಬಿಡಲಾಗಿದೆ.
ಕದ್ರಾ ಜಲಾಶಯದಲ್ಲಿ ಗರಿಷ್ಠ ಮಟ್ಟ 34.50 ಇದ್ದು ಜಲಾಶಯದ ಇಂದಿನ ಮಟ್ಟ 32.15 ಇದೆ. ಜಲಾಶಯದಲ್ಲಿ 49,800 ಒಳಹರಿವು, 49,800 ಹೊರಹರಿವು ಇದ್ದು ಜಲಾಶಯದಿಂದ 50,000 ಕ್ಯೂಸೆಕ್ ನೀರು ಕಾಳಿ ನದಿಗೆ ನಾಲ್ಕು ಗೇಟ್ಗಳ ಮೂಲಕ ಇಂದು ನೀರು ಬಿಡಲಾಗಿದೆ. ಈ ಕಾರಣದಿಂದ ಜಲಾಶಯದ ತಟದಲ್ಲಿರುವ ನಿವಾಸಿಗಳಿಗೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ತಿಳಿಸಲಾಗಿದೆ. ಶರಾವತಿ ನದಿ ನೀರು ಬಿಟ್ಟಿರುವುದರಿಂದ ಕೂಡ ಹೊನ್ನಾವರ ಭಾಗದ ನದಿ ಜಲಾಶಯದ ತಟದ ಹಳ್ಳಿ ಜನರಿಗೂ ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.