ಚಾಮರಾಜನಗರ: ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ದೇಶೀಗೌಡನಪುರ ಗ್ರಾಮದ ವೀರಭದ್ರಸ್ವಾಮಿ(4) ಮೃತಪಟ್ಟ ಮಗು. ಭಾರೀ ಮಳೆಗೆ ಮನೆಯ ಗೋಡೆ ಕುಸಿದ ಪರಿಣಾಮ ವೀರಭದ್ರಸ್ವಾಮಿ ಮೃತಪಟ್ಟಿದ್ದಾನೆ. ಅಲ್ಲದೆ ಈ ಘಟನೆಯಲ್ಲಿ ತಂದೆ ಮಲ್ಲೇಶ್ ಮತ್ತು ತಾಯಿ ಚೆನ್ನಮ್ಮ ಅವರಿಗೂ ಗಂಭೀರ ಗಾಯಗಳಾಗಿದೆ.
ಗಾಯಾಳುಗಳನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸೋಮವಾರ ರಾತ್ರಿ ಚಾಮರಾಜನಗರದಲ್ಲಿ ಧಾರಾಕಾರ ಮಳೆಯಾಗಿದೆ. ಮನೆಯಲ್ಲಿ ಮಲಗಿದ್ದ ವೇಳೆ ದಿಢೀರನೇ ಮನೆಯ ಗೋಡೆ ಕುಸಿದ ಪರಿಣಾಮ ನಾಲ್ಕು ವರ್ಷದ ಮಗು ಸಾವನ್ನಪಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆ-ತಾಯಿಗೆ ತಮ್ಮ ಮಗು ಮೃತಪಟ್ಟಿರುವ ವಿಷಯವೇ ತಿಳಿದಿಲ್ಲ ಎನ್ನಲಾಗಿದೆ.
ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸೋಮವಾರ ಸಂಜೆ ವೇಳೆಗೆ ದಿಢೀರ್ ಎಂದು ಭಾರೀ ಮಳೆಯಾಗಿದೆ. ನಗರದ ಹೃದಯಭಾಗವಾದ ಮೆಜೆಸ್ಟಿಕ್ ಸೇರಿದಂತೆ ಮೈಸೂರು ಸರ್ಕಲ್, ಸಂಜಯ್ ನಗರ, ಯಶವಂತಪುರ, ಕೋರಮಂಗಲ, ಹೆಬ್ಬಾಳ, ಚಾಮರಾಜನಗರ ಭಾಗಗಳಲ್ಲಿ ಮಳೆಯಾಗಿದೆ.