ನವದೆಹಲಿ: ಎಕ್ಸಿಟ್ ಪೋಲ್ಗಳ ಫಲಿತಾಂಶವನ್ನು ವಿಪಕ್ಷ ಕೂಟ ಐಎನ್ಡಿಐಎ (INDIA) ನಂಬಲು ಸಿದ್ಧವಿಲ್ಲ. ಬಿಜೆಪಿಯ ಚಾರ್ ಸೌ ಪಾರ್ ಕನಸು ನನಸಾಗೋದು ಇರಲಿ, ಬಹುಮತದ ಗೆರೆಯನ್ನೂ ಎನ್ಡಿಎ ದಾಟಲ್ಲ. ವಿನ್ ಆಗೋದು ನಾವೇ. ನಮಗೆ 295 ಸೀಟ್ ಬರೋದು ಪಕ್ಕಾ ಎಂದು ಐಎನ್ಡಿಐಎ ನಾಯಕರು ಹೇಳ್ತಿದ್ದಾರೆ.
ಲೋಕಸಭೆ ಚುನಾವಣೆಯ ಫಲಿತಾಂಶ ಎಕ್ಸಿಟ್ ಪೋಲ್ಗಳಲ್ಲಿ ತೋರಿಸಿರುವ ಫಲಿತಾಂಶಕ್ಕಿಂತ ಸಂಪೂರ್ಣ ವಿರುದ್ಧ ಇರಲಿದೆ ಎಂಬ ವಿಶ್ವಾಸವನ್ನು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ವ್ಯಕ್ತಪಡಿಸಿದ್ದಾರೆ. ನಾವು ಕಾಯಬೇಕು, ಕಾದು ನೋಡಬೇಕು ಎಂದಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎಕ್ಸಿಟ್ ಪೋಲ್ಗಳ ಬಗ್ಗೆ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.
ಎರಡು ತಿಂಗಳ ಹಿಂದೆಯೇ ಮನೆಯಲ್ಲಿ ಕುಳಿತು ಸಿದ್ದಪಡಿಸಿದ ವರದಿಗಳನ್ನು ಈಗ ಎಕ್ಸಿಟ್ ಪೋಲ್ ಅಂತಾ ತೋರಿಸಲಾಗ್ತಿದೆ ಎಂದು ಆಪಾದಿಸಿದ್ದಾರೆ. ಈ ಮತಗಟ್ಟೆ ಸಮೀಕ್ಷೆಗಳು ವಾಸ್ತವ ಪರಿಸ್ಥಿತಿಗಳಿಗೆ ಅನುಗುಣವಾಗಿಲ್ಲ ಎಂದಿದ್ದಾರೆ. ಅಲ್ಲದೇ ಮತ ಎಣಿಕೆ ಪ್ರಕ್ರಿಯೆ ಮತ್ತು ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿಪಕ್ಷ ನಾಯಕರು ನಿನ್ನೆಯೇ ಆಯೋಗದ ಮೆಟ್ಟಿಲೇರಿದ್ದಾರೆ. ಆದ್ರೆ, ವಿಪಕ್ಷಗಳ ಈ ರಾಜಕೀಯಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಾಗ್ದಾಳಿಗೆ ಇಳಿದಿದೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೋದಿ ಪ್ಲಾನ್ ಏನು?
ಪ್ರಜಾಪ್ರಭುತ್ವದ ವ್ಯವಸ್ಥೆಯ ಭಾಗವಾಗಿರುವ ಚುನಾವಣಾ ಆಯೋಗದ ಮೇಲೆ ಇಂಡಿ ಕೂಟ ನಂಬಿಕೆ ಹೊಂದಿಲ್ಲ. ಇದು ಅವರ ಸೋಲಿನ ಭೀತಿ, ಹತಾಶೆಯನ್ನು ತೊರಿಸುತ್ತಿದೆ ಎಂದು ಕಿಡಿಕಾರಿದೆ. ಅಂದ ಹಾಗೇ ನಾಳೆಯ ಚುನಾವಣೆಯಲ್ಲಿ ಒಂದೊಮ್ಮೆ ಎಕ್ಸಿಟ್ ಪೋಲ್ಗಳು (Exit Poll) ನಿಜವಾಗಿ, ಮತ್ತೆ ಮೋದಿ ಸರ್ಕಾರದ ಪರವಾಗಿಯೇ ಜನಾದೇಶ ಸಿಕ್ಕರೇ ರಾಹುಲ್ ಗಾಂಧಿಯ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡುತ್ತದೆ.
ರಾಹುಲ್ ಏನು ಮಾಡಬಹುದು?
* ಕಾಂಗ್ರೆಸ್ ಸೋಲಿನ ನೈತಿಕ ಹೊಣೆ ಹೊರಬಹುದು.
* ತಳಮಟ್ಟದಿಂದ ಮತ್ತೆ ಪಕ್ಷ ಕಟ್ಟಲು ಮುಂದಾಗಬಹುದು.
* ಮೋದಿ ವಿರುದ್ಧ ನಿರಂತರವಾಗಿ ಹೋರಾಟ ಮಾಡಬಹುದು.
* ಸಕ್ರಿಯ ರಾಜಕಾರಣದಿಂದ ಮತ್ತೆ ಕೆಲ ಹಿಂದೆ ಸರಿಯಬಹುದು.
* ಕಾಂಗ್ರೆಸ್ನಲ್ಲಿ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡಬಹುದು.
* ಪ್ರಾದೇಶಿಕ ಪಕ್ಷಗಳ ಸಂಗ ತೊರೆದು ಏಕಾಂಗಿ ಹೋರಾಟ ರೂಪಿಸಬಹುದು.
* ಇದೇನು ಬೇಡವೇ ಬೇಡ ಎಂದು ವಿದೇಶಕ್ಕೆ ಹೋಗಬಹುದು.