ಬೆಂಗಳೂರು: ಐವರು ಕೂಲಿ ಕಾರ್ಮಿಕರ ಮನೆಗೆ ವ್ಯಕ್ತಿಗಳು ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬಾಗಲಗುಂಟೆಯ ಮಂಜುನಾಥ ನಗರದಲ್ಲಿ ನಡೆದಿದೆ.
ಜಗದೀಶ್ ಮತ್ತು ಆತನ ಗ್ಯಾಂಗ್ ಹಲ್ಲೆ ನಡೆಸಿದೆ. ಕೂಲಿಕಾರ್ಮಿಕರಾದ ಗಂಗಾಧರ್, ಸಂತೋಷ್, ಚಂದ್ರು, ರಾಮು ಮತ್ತು ರಂಗಸ್ವಾಮಿ ಹಲ್ಲೆಗೊಳಗಾಗಿದ್ದಾರೆ. ಜಗದೀಶ್ ಮತ್ತು ಗಂಗಾಧರ್ ನಡುವೆ ಇದ್ದ ಹಳೆ ವೈಷಮ್ಯವೇ ಹಲ್ಲೆಗೆ ಕಾರಣ ಎಂದು ಹೇಳಲಾಗುತ್ತದೆ.
ಹಲ್ಲೆಯಲ್ಲಿ ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿ ಸಂತೋಷ್ ಎಂಬ ಕಾರ್ಮಿಕನ ಕೈ ತುಂಡಾಗಿದೆ. ಗಾಯಾಳುಗಳಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೈ ತುಂಡಾಗಿರುವ ಸಂತೋಷ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೌಸ್ ಮ್ಯಾಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಐವರು ಕೂಲಿ ಕಾರ್ಮಿಕರು ಬೇರೆ ಬೇರೆ ಜಿಲ್ಲೆಯವರಾಗಿದ್ದು, ದುಡಿಯಲಿಕ್ಕೆ ಅಂತ ಬೆಂಗಳೂರಿಗೆ ಬಂದು ಬಾಗಲಗುಂಟೆ ಮಂಜುನಾಥ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.
ಹದಿನೈದು ದಿನಗಳ ಹಿಂದೆ ಹಲ್ಲೆ ಮಾಡಿರುವ ಜಗದೀಶ್ ಮತ್ತು ಗಂಗಾಧರ್ ಗೆ ಬಾರ್ ವೊಂದರಲ್ಲಿ ಗಲಾಟೆ ಆಗಿತ್ತು. ಆ ಗಲಾಟೆಯ ಪ್ರತೀಕಾರವಾಗಿ ಜಗದೀಶ್ ಗ್ಯಾಂಗ್ ಕಟ್ಟಿಕೊಂಡು ಇಂದು ಮಧ್ಯರಾತ್ರಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಬಾಗಲಗುಂಟೆ ಪೊಲೀಸರಿಗೆ ಕೇಸ್ ದಾಖಲು ಮಾಡಲು ಸೂಚನೆ ನೀಡಿದ್ದು, ಕೇಸ್ ದಾಖಲು ಮಾಡಿಕೊಂಡಿರುವ ಬಾಗಲಗುಂಟೆ ಪೊಲೀಸರು ಹಲ್ಲೆ ಮಾಡಿ ಪರಾರಿಯಾಗಿರುವ ಜಗದೀಶ್ ಅಂಡ್ ಗ್ಯಾಂಗ್ ಗೆ ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv