ವಿಜಯಪುರ: ಚುನಾವಣೆಯಲ್ಲಿ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದ ವಿವಿ ಪ್ಯಾಟ್ ದೃಡೀಕರಣ ಬಾಕ್ಸ್ ಗಳು ಹೆದ್ದಾರಿ ಪಕ್ಕದ ಶೆಡ್ನಲ್ಲಿ ಪತ್ತೆಯಾಗಿದ್ದು, ಚುನಾವಣೆಯ ಅಕ್ರಮ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಬಳಿ ರಸ್ತೆ ಕಾಮಗಾರಿ ನಡೆಸುವ ಕಾರ್ಮಿಕರು ವಾಸಿಸುವ ಶೆಡ್ ನಲ್ಲಿ ವಿವಿ ಪ್ಯಾಟ್ ಖಾಲಿ ಬಾಕ್ಸ್ ಗಳು ಪತ್ತೆಯಾಗಿವೆ. ಇದರಲ್ಲಿ ಕಾರ್ಮಿಕರು ಆಹಾರ ಪದಾರ್ಥ, ಬಟ್ಟೆಗಳನ್ನು ಸಂಗ್ರಹಿಸಿದ್ದಾರೆ.
ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಇವುಗಳನ್ನು ಪತ್ತೆ ಮಾಡಿದ್ದು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಚುನಾವಣೆಯ ಬಳಿಕ 45 ದಿನಗಳವರೆಗೂ ವಿವಿ ಪ್ಯಾಟ್ ಬಾಕ್ಸ್ ಗಳನ್ನು ಸ್ಟ್ರಾಂಗ್ ರೂಂ ನಲ್ಲಿ ರಕ್ಷಿಸಬೇಕು ಎಂಬ ನಿಯಮವಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ಶೆಡ್ ನಲ್ಲಿ ಪತ್ತೆಯಾಗಿರುವ ಬಾಕ್ಸ್ ಗಳು ಚುನಾವಣೆಗೂ ಮುನ್ನ ಶಿಕ್ಷಕರಿಗೆ ತರಬೇತಿ ನೀಡುವ ವೇಳೆ ಬಳಕೆ ಮಾಡಿದ್ದ ಬಾಕ್ಸ್ ಎಂದು ಸ್ಪಷ್ಟನೆ ನೀಡಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಶಿವಾನಂದ್ ಪಾಟೀಲ್ ಅವರು ಜಯಗಳಿಸಿದ್ದರು. ಅಲ್ಲದೇ ಕಾರ್ಮಿಕರು ನಿರ್ಮಿಸಿರುವ ಶೆಡ್ ಗಳು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಸೇರಿದೆ ಎನ್ನಲಾಗಿದ್ದು, ಇದರಿಂದ ಜೆಡಿಎಸ್ ಕಾರ್ಯಕರ್ತರು ಅಕ್ರಮದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.