ಬೆಂಗಳೂರು: ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ಇಂದು ನಡೆಯಲಿದೆ. ಇದರಲ್ಲಿ ನಾಲ್ಕನೇ ಸ್ಥಾನ ಯಾರ ಪಾಲಾಗುತ್ತೆ ಎಂದು ಎಲ್ಲ ಪಕ್ಷದವರು ಕಾತುರದಿಂದ ಕಾಯುತ್ತಿದ್ದಾರೆ.
15 ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ 11 ರಾಜ್ಯಗಳ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಆದರೆ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ 16 ಸ್ಥಾನಗಳಿಗೆ ಬಿಗ್ ಫೈಟ್ ನಡೆದಿದೆ. ಕರ್ನಾಟಕದಲ್ಲಿ ನಾಲ್ಕನೇ ಸ್ಥಾನ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜಿದ್ದಿಗೆ ಬಿದ್ದಿರುವ ಕಾರಣ ಎರಡೂ ಪಕ್ಷಗಳ ನಡುವೆ ಈವರೆಗೂ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ. ಚೌಕಾಸಿ ನಡೆಯುತ್ತಲೇ ಇದೆ. ಅಡ್ಡಮತದಾನದ ಭೀತಿಯೂ ಕಾಡುತ್ತಿದೆ. ಸದ್ಯದ ಬೆಳವಣಿಗೆ ಬಿಜೆಪಿಯ ಮೂರನೇ ಅಭ್ಯರ್ಥಿಗೆ ಅನುಕೂಲವಾಗುವ ರೀತಿ ಕಾಣುತ್ತಿದೆ. ಈ ಮಧ್ಯೆ, ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಹಣಕ್ಕಾಗಿ ಮೊಮ್ಮಗಳನ್ನೇ ಮಾರಾಟ ಮಾಡಿದ ಪಾಪಿ ಅಜ್ಜ
ಮತ ಚಲಾವಣೆಗೆ ಎರಡೆರಡು ಪ್ರತ್ಯೇಕ ಬೂತ್ ಮಾಡಲಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಅಧಿಕೃತ ಪ್ರತಿನಿಧಿಗಳಿಗೆ ಪ್ರತ್ಯೇಕ ಕಂಪಾರ್ಟ್ಮೆಂಟ್ ನಿರ್ಮಿಸಲಾಗಿದೆ. ಪಕ್ಷದ ಪ್ರತಿನಿಧಿಗೆ ಆಯಾ ಪಕ್ಷಗಳ ಶಾಸಕರು ತೋರಿಸಿ ಮತ ಹಾಕಬೇಕಾಗುತ್ತದೆ. ಮತಕೇಂದ್ರದ ಒಳಗೆ ಸಿಸಿಟಿವಿ ಅಳವಡಿಸಲಾಗಿದೆ.
ರಾಜಸ್ಥಾನ, ಹರಿಯಾಣದ ರಾಜ್ಯಸಭೆ ಚುನಾವಣಾ ಫಲಿತಾಂಶವೂ ತೀವ್ರ ಕುತೂಹಲ ಕೆರಳಿಸಿದೆ. ಅಲ್ಲಿ ಖ್ಯಾತ ಉದ್ಯಮಿಗಳು ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧೆ ಮಾಡಿರೋದು ಕಾಂಗ್ರೆಸ್ ಪಕ್ಷದ ಆತಂಕಕ್ಕೆ ಕಾರಣವಾಗಿದೆ.