ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ 7ನೇ ಹೊಸಕೋಟೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತೆ ಕ್ಲಬ್(ಇಎಲ್ಸಿ) ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾವನ್ನು ಹಮ್ಮಿಕೊಳ್ಳಲಾಯಿತು.
ಜೂನ್ 15 2019ರಲ್ಲಿ ಸ್ಥಾಪನೆ ಅದ ಚುನಾವಣಾ ಸಾಕ್ಷರತೆ ಕ್ಲಬ್ನಲ್ಲಿ ನೋಡಲ್ ಅಧಿಕಾರಿಯಾಗಿ ಚಂದ್ರಹಾಸ ಮಾಯಗೌಡ, ಸಮಾಜ ಶಿಕ್ಷಕಿ ಶೈಲಾ, ಸಹಾಯಕ ನೋಡಲ್ ಅಧಿಕಾರಿಯಾಗಿ ಬಸವರಾಜ್ ಹಾಗೂ ಸುಮಾರು 10 ಜನ ವಿದ್ಯಾರ್ಥಿ ಪ್ರತಿನಿಧಿಗಳನ್ನು ಈ ಕ್ಲಬ್ ಒಳಗೊಂಡಿದೆ. ಇದರ ಉದ್ದೇಶ ಶಾಲೆಯ ಆಸು-ಪಾಸಿನಲ್ಲಿರುವ ಗ್ರಾಮದ ಜನರಿಗೆ ಜಾಥಾದ ಮೂಲಕ ಮತದಾನದ ಅರಿವು ಹಾಗೂ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಇಂದು ಶಾಲಾ ಮಕ್ಕಳು 7ನೇ ಹೊಸಕೋಟೆಯ ಬೀದಿಗಳಲ್ಲಿ ಜಾಥಾ ನಡೆಸಿ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಮತದಾನದ ಅರಿವು ಮೂಡಿಸಿದ್ದಾರೆ. ಶಾಲೆಯಲ್ಲಿಯೇ ಮಂತ್ರಿ ಮಂಡಲವನ್ನು ರಚಿಸಿ ಯಾವ ರೀತಿ ಅಭ್ಯರ್ಥಿಯು ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು? ಜನ ಸಾಮಾನ್ಯರು ಯಾವ ರೀತಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು? ಹೀಗೆ ಮತದಾನದ ಹಲವು ವಿಚಾರದ ಬಗ್ಗೆ ಶಾಲೆಯಲ್ಲಿಯೇ ಮಾದರಿ ಚುನಾವಣೆಯನ್ನು ಏರ್ಪಡಿಸಿ, ಶಾಲಾ ಮಂತ್ರಿಮಂಡಲವನ್ನು ರಚಿಸಿಕೊಂಡು ಶಾಲೆಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿದರು.