ಚಿಕ್ಕಮಗಳೂರು: ಕಳೆದ 20 ವರ್ಷಗಳಿಂದ ಶಾಸಕರಾಗಿರುವ ಸಿ.ಟಿ ರವಿ ಏನು ಮಾಡಿದ್ದಾರೆ. ಅಭಿವೃದ್ಧಿ ಮಾಡಲು ಅವರಿಗೆ 20 ವರ್ಷ ಸಾಕಾಗಿಲ್ವಾ ಎಂದು ಮತದಾರರು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಸಿ.ಟಿ ರವಿ (CT Ravi) ಸಂಬಂಧಿ ಸುದರ್ಶನ್ಗೆ ಕ್ಲಾಸ್ ತೆಗೆದುಕೊಂಡಿರುವ ಘಟನೆ ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಹಾಗೂ ಶಾಸಕ ಸಿ.ಟಿ ರವಿ ಬಾಮೈದ ಸುದರ್ಶನ್ ಚುನಾವಣಾ ಪ್ರಚಾರಕ್ಕೆಂದು ತಾಲೂಕಿನ ಉದ್ದೇಬೋರನಹಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ಮತದಾರರು 20 ವರ್ಷದಿಂದ ಶಾಸಕರಾಗಿದ್ದಾರೆ, ಲಿಂಗಾಯತರ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಚುನಾವಣೆ (Election) ಬಂದಿದೆ ಎಂದು ಈಗ ಬಂದಿದ್ದೀರಾ? ಇಷ್ಟು ವರ್ಷ ಎಲ್ಲಿಗೆ ಹೋಗಿದ್ರಿ? ಎಂದು ಮತದಾರರು ಕ್ಲಾಸ್ ತೆಗೆದುಕೊಂಡಿದ್ದಾರೆ. ನಮ್ಮ ಊರನ್ನ ಅಭಿವೃದ್ಧಿ ಮಾಡಲು ಸಿ.ಟಿ ರವಿಗೆ 20 ವರ್ಷ ಸಾಕಾಗಿಲ್ವಾ ಎಂದು ಪ್ರಚಾರಕ್ಕೆ ಹೋದವರಿಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಬಿಜೆಪಿಗೆ ಸುಮಲತಾ ಬೂಸ್ಟರ್- ಹಾಡಿಹೊಗಳಿದ ಬಿ.ಎಲ್ ಸಂತೋಷ್
ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಪ್ರಚಾರದ ವರಸೆಯನ್ನೂ ಜೋರು ಮಾಡಿದೆ. ಸಿ.ಟಿ ರವಿ ಸಂಬಂಧಿ ಸುದರ್ಶನ್, ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಗ್ರಾಮ ಮಟ್ಟದಲ್ಲಿ ಸಭೆ ಆರಂಭಿಸಿದ್ದಾರೆ. ಹೀಗೆ ಸಭೆ ಹಿನ್ನೆಲೆ ಕಳೆದ ರಾತ್ರಿ ಉದ್ದೇಬೋರನಹಳ್ಳಿಗೆ ಹೋದಾಗ ಮತದಾರರು ಕ್ಲಾಸ್ ತೆಗೆದುಕೊಂಡಿದ್ದಾರೆ. ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡ ಹಿನ್ನೆಲೆ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಘಟಕ ಕೂಡ ಮುಜುಗರಕ್ಕೀಡಾಗಿದೆ.
ಕಳೆದ ಎಂಟತ್ತು ದಿನಗಳ ಹಿಂದಷ್ಟೆ ತಾಲೂಕಿನ ಭಕ್ತರಹಳ್ಳಿಯಲ್ಲಿ ಬಿಜೆಪಿಯವರು ನೀಡಿದ ಸೀರೆಯನ್ನ ಮತದಾರರು ನಡು ರಸ್ತೆಯಲ್ಲಿ ಬೆಂಕಿ ಹಾಕಿದ್ದರು. ನಮಗೆ ಸೀರೆ ಬೇಡ, ಸೌಲಭ್ಯ ಬೇಕು ಎಂದು ಐದಾರು ಸೀರೆಗಳನ್ನ ನಡು ರಸ್ತೆಯಲ್ಲಿ ಸುಟ್ಟು ಹಾಕಿದ್ದರು. ಇದೀಗ ಪ್ರಚಾರ ಹಾಗೂ ಸಭೆಗೆ ಹೋದಾಗಲೂ ರಸ್ತೆಯಲ್ಲಿ ಕ್ಲಾಸ್ ತೆಗೆದುಕೊಂಡಿರುವುದು ಬಿಜೆಪಿ ವಲಯಕ್ಕೆ ಬಿಸಿ ತುಪ್ಪವಾಗಿದೆ.