ಮುಂಬೈ: ಹುಣಸೂರು ಕ್ಷೇತ್ರದ ಮತದಾರರಿಗೆ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ವಿಡಿಯೋ ಕಾಲ್ ಮಾಡುವ ಮೂಲಕ ಸಂದೇಶ ಕಳುಹಿಸಿದ್ದಾರೆ.
ವಿಡಿಯೋದಲ್ಲಿ ವಿಶ್ವನಾಥ್ ಅವರು, ನಾನು ನನ್ನನ್ನು ದುಡ್ಡಿಗಾಗಿ ಮಾರಿಕೊಂಡವಲ್ಲ. ಇದು ನನ್ನ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರವಾಗಿದೆ. ನೀವು ನನ್ನ ಮೇಲೆ ವಿಶ್ವಾಸವಿಟ್ಟು ಕೊಟ್ಟಂತಹ ಮತಗಳಿಗೆ ಅಪಚಾರ ಮಾಡುವನು ನಾನಲ್ಲ ಎಂದಿದ್ದಾರೆ.
ನೀವು ಮತಕೊಟ್ಟು ಹರಿಸಿದ ನಿಮ್ಮ ಶಾಸಕ ಪದೇ ಪದೇ ಆದ ಅವಮಾನ, ತಾರತಮ್ಯಗಳನ್ನು ನುಂಗಲಾರದೆ ತನ್ನ ಆತ್ಮಗೌರವಕ್ಕಾಗಿ, ಕ್ಷೇತ್ರದ ಜನರ ಸ್ವಾಭಿಮಾನ ಮತ್ತು ಒಳಿತಿಗಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ನನ್ನ ಮೇಲಿನ ಅನರ್ಹತೆ ತೀರ್ಪು ಅನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುತ್ತೇನೆ. ಸದ್ಯದಲ್ಲೇ ಹುಣಸೂರಿಗೆ ಭೇಟಿ ನೀಡಿ ನಿಮ್ಮ ಮುಂದೆ ವಾಸ್ತವ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
ಭಾನುವಾರ ಸ್ಪೀಕರ್ ರಮೇಶ್ ಕುಮಾರ್ ತುರ್ತು ಸುದ್ದಿಗೋಷ್ಠಿ ಕರೆದು 14 ಮಂದಿ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದಾರೆ. ಹೀಗಾಗಿ ಇದರಿಂದ ಅತೃಪ್ತ ಶಾಸಕರು ತಮ್ಮ ಅನರ್ಹತೆಯ ಬಗ್ಗೆ ಪ್ರಶ್ನಿಸಿ ಇಂದು ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇತ್ತ ಅನರ್ಹ ಬೆನ್ನಲ್ಲಿಯೇ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂಟಿಬಿ ನಾಗರಾಜ್ ಈ ಐವರು ಶಾಸಕರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಭಾನುವಾರ ಮಧ್ಯರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್ ಪೋರ್ಟಿಗೆ ಆಗಮಿಸಿದ್ದಾರೆ.