ಬೆಳಗಾವಿ: ಗೋಹತ್ಯೆ ಮಾಡುವವರ ಮೇಲೆ ಪ್ರಕರಣ ದಾಖಲಿಸುವುದಿಲ್ಲ. ಅದನ್ನು ತಡೆಯುವ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಆದರೂ ಗೋವು ರಕ್ಷಣೆಗೆ ಬಜರಂಗದಳ ಟೊಂಕ ಕಟ್ಟಿ ನಿಂತಿದೆ ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕೇಶವ ಹೆಗಡೆ ಹೇಳಿದರು.
ಇಂದು ನಗರದ ಮರಾಠಾ ಮಂದಿರದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಹಿತ ಚಿಂತಕ ಅಭಿಯಾನದ ಸಮಾವೇಶ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜವನ್ನು ಸದೃಢಗೊಳಿಸಲು ಎಲ್ಲರೂ ಸೇರಿ ಶ್ರಮಿಸಬೇಕಿದೆ. ಎಲ್ಲಾ ಸಮುದಾಯದ ಹಿಂದೂಗಳು ಸಂಕಲ್ಪ ಮಾಡಿ ರಾಷ್ಟ್ರ ವಿರೋಧಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.
ಕೇಂದ್ರ ಸರ್ಕಾರ ಹಿಂದೂಗಳ ರಕ್ಷಣೆಗೆ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ. ಇದನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ. ಈ ಕಾಯ್ದೆಯ ಬಗ್ಗೆ ಯಾರಿಗೆ ತಿಳಿದಿರುವುದಿಲ್ಲವೋ ಅಂಥವರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರುದ್ರಕೇಶ ಮಠದ ಹರಿಗುರು ಶ್ರೀ ಮಹಾರಾಜ ಸ್ವಾಮೀಜಿ ಮಾತನಾಡಿ, ಕಳೆದ 55 ವರ್ಷಗಳಿಂದ ಆರಂಭವಾದ ವಿಶ್ವ ಹಿಂದೂ ಪರಿಷದ್ ಸಂಘಟನೆಯಲ್ಲ. ಇದು ಹಿಂದೂತ್ವದ ಆಧಾರ ಸ್ಥಂಭವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ಲಾಲಚಂದ್ರ ಚಂಡೇರಿ, ಜೀಜಾಲಾಲ ಪಟೇಲ್, ಬಾರ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಮುಳವಾಡಮಠ, ವಿನಾಯಕ್ ಕಾಕತಿಕರ, ಸುನೀಲ್ ತಳವಾರ, ಜಯರಾಮ್ ಸುತಾರ, ಬಸವರಾಜ್ ಹಳಬರ, ಅರುಣ್ ಗವಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.