ಕನ್ನಡದ ಅಭಿಜಾತ ಕಲಾವಿದ ಡಾ. ವಿಷ್ಣುವರ್ಧನ್ (Vishnuvardhan) ಅವರ ಅಂತ್ಯ ಸಂಸ್ಕಾರಗೊಂಡ ಸ್ಥಳ ಪುಣ್ಯಭೂಮಿ (Punyabhoomi) ಆಗಬೇಕೆಂಬ ವಿಷ್ಣು ಅಭಿಮಾನಿಗಳ ಬೇಡಿಕೆ ಕನ್ನಡಿಗರ ಅಪೇಕ್ಷೆಯ ಸಂಕೇತವಾಗಿದೆ. ಸರ್ಕಾರ ಸಕಾರತ್ಮಕವಾಗಿ ಮನಸ್ಸು ಮಾಡಿದರೆ ಈ ಬೇಡಿಕೆ ಈಡೇರಿಸುವುದು ದೊಡ್ಡ ವಿಷಯವೇನಲ್ಲ. ಈ ನಿಟ್ಟಿನಲ್ಲಿ ಕೂಡಲೇ ಗಮನ ಹರಿಸುವಂತೆ ಒತ್ತಾಯಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಒತ್ತಾಯ ಮಾಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 5 ಎಕರೆ ಜಾಗದಲ್ಲಿ 11 ಕೋಟಿ ವೆಚ್ಚದಲ್ಲಿ ವಿಷ್ಣುವರ್ಧನ್ ಅವರ ಇತಿಹಾಸ ಸಾರುವ ಸ್ಮಾರಕ ಲೋಕಾರ್ಪಣೆಗೊಳಿಸಿದ್ದನ್ನು (ಕಳೆದ ವರ್ಷ) ಈ ಸಂದರ್ಭದಲ್ಲಿ ಗೌರವ ಪೂರ್ವಕವಾಗಿ ಸ್ಮರಿಸಿರುವ ವಿಜಯೇಂದ್ರ, ಕೂಡಲೇ ಸರಕಾರ ಮಧ್ಯ ಪ್ರವೇಶಿಸಿ ಪುಣ್ಯಭೂಮಿಯ ಜಾಗವನ್ನು ಅಭಿಮಾನಿಗಳಿಗೆ ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
- Advertisement
- Advertisement
ಪುಣ್ಯಭೂಮಿ ಕುರಿತಾದ ಹೋರಾಟ ಇಂದು ಬೆಳಗಿನಿಂದಲೇ ಆರಂಭವಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ವಿಷ್ಣು ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದರು. ಜೊತೆಗೆ 42ಕ್ಕೂ ಹೆಚ್ಚು ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ನೀಡಿದ್ದವು. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಈ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಹೋರಾಟಕ್ಕೆ ಇಳಿದಿದ್ದರು.
ಈ ಹೋರಾಟಕ್ಕೆ ಕಿಚ್ಚ ಸುದೀಪ್, ಡಾಲಿ ಧನಂಜಯ್, ವಸಿಷ್ಠ ಸಿಂಹ, ನೀನಾಸಂ ಸತೀಶ್ ಸೇರಿದಂತೆ ಹಲವು ನಟರು ಮತ್ತು ನಟಿಯರು ಹಾಗೂ ತಂತ್ರಜ್ಞರು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಷಯವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಸುದೀಪ್ ಭೇಟಿ ಆಗಲಿದ್ದಾರೆ ಎನ್ನಲಾಗುತ್ತಿದೆ.