ಚಂಡೀಗಢ: ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಬಿಜೆಪಿ ಹರ್ಯಾಣದಿಂದ ಕಣಕ್ಕೆ ಇಳಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಹರ್ಯಾಣದ ರೋಹ್ಟಕ್ ಕ್ಷೇತ್ರದಿಂದ 2019ರ ಲೋಕಸಭಾ ಚುನಾವಣೆಗೆ ಸೆಹ್ವಾಗ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಘಟಕ ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಬಿಜೆಪಿ ನಾಯಕರು ಸೆಹ್ವಾಗ್ ಅವರ ಮುಂದೆ ಈ ಪ್ರಸ್ತಾಪನನ್ನು ಇಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಕಾಂಗ್ರೆಸ್ ಪಕ್ಷದ ದೀಪೇಂದರ್ ಸಿಂಗ್ ಹೂಡ ಆಯ್ಕೆ ಆಗಿದ್ದು, ಅವರನ್ನು ಸೋಲಿಸಲು ಸೆಹ್ವಾಗ್ ಅವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಆದರೆ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿಲು ರಾಜ್ಯ ಬಿಜೆಪಿ ನಾಯಕರು ಹಿಂದೇಟು ಹಾಕಿದ್ದಾರೆ.
ಈ ಬಗ್ಗೆ ಸೆಹ್ವಾಗ್ ಅವರನ್ನು ಮನವೊಲಿಸಲು ಬಿಜೆಪಿ ಹಿರಿಯ ಮುಖಂಡರೊಬ್ಬರಿಗೆ ಜವಾಬ್ದಾರಿ ವಹಿಸಿದೆ ಎನ್ನಲಾಗಿದ್ದು, ಸೆಹ್ವಾಗ್ ಅವರಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಸದ್ಯ ಅವರ ಪ್ರತಿಕ್ರಿಯೆ ತಿಳಿಸಲು ಸಮಯಾವಕಾಶ ನೀಡಲಾಗಿದೆ.
ದೆಹಲಿಯ ರಾಜಕೀಯದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ನಾಯಕರೇ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹರ್ಯಾಣದ ರಾಜ್ಯಾಧ್ಯಕ್ಷ ಸುಭಾಶ್ ಬರಾಲಾ, ಈ ವಿಚಾರದ ಬಗ್ಗೆ ಮಾತನಾಡಲು ಸೆಹ್ವಾಗ್ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂದಿದ್ದಾರೆ.
ಹರ್ಯಾಣದಲ್ಲಿ ಒಟ್ಟು 10 ಕ್ಷೇತ್ರಗಳಿದ್ದು 2014ರ ಚುನಾವಣೆಯಲ್ಲಿ ಬಿಜೆಪಿ 7 ರಲ್ಲಿ ಗೆಲು ಕಂಡಿತ್ತು. ಈ ಬಾರಿ 10 ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಪ್ಲಾನ್ ಮಾಡಿದ್ದು ಇದಕ್ಕಾಗಿ ಸೆಹ್ವಾಗ್ ಮಾತ್ರವಲ್ಲದೇ ಖ್ಯಾತ ಸೂಫಿ ಗಾಯಕ ಹನ್ಸ್ ರಾಜ್ ಅವರನ್ನು ಚುನಾವಣೆಯಲ್ಲಿ ಸ್ಪರ್ಧೆಗೆ ನಿಲ್ಲುವಂತೆ ಮನವೊಲಿಸಲಾಗಿದೆ ಎನ್ನಲಾಗಿದೆ.
2014 ರಲ್ಲಿ ಬಿಜೆಪಿ ಸೋಲುಂಡಿದ್ದ ಸಿರ್ಸಾ ಕ್ಷೇತ್ರದ ಟಿಕೆಟ್ ಅನ್ನು ಹನ್ಸ್ ರಾಜ್ ಅವರಿಗೆ ನೀಡಲು ಬಿಜೆಪಿ ಮುಂದಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಹನ್ಸ್ ರಾಜ್ ಹನ್ಸ್ ಅವರಿಗೆ ಸಿರ್ಸಾ ಕ್ಷೇತ್ರದಲ್ಲಿ ಹೆಚ್ಚಿನ ಬೆಂಬಲವಿರುವ ಕಾರಣ ಅಲ್ಲೇ ಸ್ಪರ್ಧೆಗೆ ಸಿದ್ಧತೆ ನಡೆಸುವಂತೆ ಸೂಚಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv