ಮೆಲ್ಬೋರ್ನ್: ಮಳೆಯಿಂದ ರದ್ದಾದ ಆಸೀಸ್ ವಿರುದ್ಧ ಟಿ20 ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮೆಲ್ಬೋರ್ನ್ ಪಂದ್ಯದ 19 ಓವರ್ ವೇಳೆ ಮಳೆಯಾಗಿ ಬಾಲ್ ಒದ್ದೆಯಾದ ಪರಿಣಾಮ ಟೀಂ ಇಂಡಿಯಾ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಲು ಸಮಸ್ಯೆ ಎದುರಿಸಿದ್ದರು. ಈ ವೇಳೆ ಅಂಪೈರ್ ಬಳಿ ತೆರಳಿದ ಕೊಹ್ಲಿ ಆಟಕ್ಕೆ ತಡೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಕೊಹ್ಲಿ ಮನವಿ ತಿರಸ್ಕರಿಸಿದ ಅಂಪೈರ್ ಆಟ ಮುಂದುವರೆಸಿದರು.
ಬುಮ್ರಾ ಓವರ್ ಮುಕ್ತಾಯದ ವೇಳೆಗೆ ಮಳೆ ಪ್ರಮಾಣ ಹೆಚ್ಚಾದರಿಂದ ಅಂಪೈರ್ ಆಟಕ್ಕೆ ತಡೆ ನೀಡಿದರು. ಈ ವೇಳೆಯೂ ಅಂಪೈರ್ ಬಳಿ ತೆರಳಿದ ವಿರಾಟ್ ಕೊಹ್ಲಿ ಸಾಕಷ್ಟು ಸಮಯ ಸಮಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಮ್ಮ ತಾಳ್ಮೆ ಕಳೆದುಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದರು.
ಆಸೀಸ್ ವಿರುದ್ಧ ಗಾಬ್ಬಾದಲ್ಲಿ ನಡೆದ ಮೊದಲ ಪಂದ್ಯದಲ್ಲೂ ಟೀಂ ಇಂಡಿಯಾ ಮಳೆಯ ಸಮಸ್ಯೆ ಎದುರಿಸಿ ಸೋಲಲು ಕಾರಣವಾಗಿತ್ತು. ಈ ಪಂದ್ಯದ ಮೊದಲ ಇನ್ನಿಂಗ್ಸ್ನ 17 ಓವರ್ ಗಳಲ್ಲಿ ಆಸೀಸ್ 158 ರನ್ ಗಳಿಸಿತ್ತು. ಆದರೆ ಡಕ್ ವರ್ಥ್ ಲೂಯಿಸ್ ನಿಯಮದ ಅನ್ವಯ ಟೀಂ ಇಂಡಿಯಾ ಗೆಲ್ಲಲು 174 ರನ್ ಗುರಿ ನಿಗದಿಯಾಗಿತ್ತು. 2ನೇ ಪಂದ್ಯದಲ್ಲೂ ಮಳೆಯಿಂದ ಪಂದ್ಯದ ಅವಧಿಯನ್ನು ಕಡಿಮೆ ಗೊಳಿಸಿ ವೇಳೆ ಟೀಂ ಇಂಡಿಯಾ 11 ಓವರ್ ಗಳಲ್ಲಿ 90 ರನ್ ಗುರಿ ನೀಡಲಾಗಿತ್ತು. ಆದರೆ ಮಳೆ ನಿರಂತರವಾಗಿ ಸುರಿದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು.
https://twitter.com/183_264/status/1065900279445495808?
ವಿರಾಟ್ ಕೊಹ್ಲಿ ಪಂದ್ಯದ ವೇಳೆ ತಾಳ್ಮೆ ಕಳೆದುಕೊಳ್ಳಲು ಪ್ರಮುಖ ಕಾರಣವಿದ್ದು, ಮಳೆಯಿಂದ ಒದ್ದೆಯಾದ ಚೆಂಡಿನಲ್ಲಿ ಬೌಲಿಂಗ್ ಮಾಡುವುದು ಕಷ್ಟವಾಗಿತ್ತು. ಇದರ ಲಾಭವನ್ನು ಪಡೆದುಕೊಂಡು ಆಸೀಸ್ ಆಟಗಾರರು ರನ್ ಪಡೆಯುವ ಅವಕಾಶವಿತ್ತು. ಅಲ್ಲದೇ ಮಳೆಯಿಂದ ಪಿಚ್ ಒದ್ದೆಯಾದರೆ ಬಳಿಕ ಬ್ಯಾಟಿಂಗ್ ನಡೆಸುವ ತಂಡಕ್ಕೆ ರನ್ ಗಳಿಸುವುದು ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv