ನೂರ್-ಸುಲ್ತಾನ್: ಇಂಧನಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 8000 ಜನರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂಸಾಚಾರದಲ್ಲಿ ಮೂವರು ಮಕ್ಕಳು ಸೇರಿದಂತೆ 164 ಜನರು ಸಾವನ್ನಪ್ಪಿದ್ದಾರೆ.
ದೇಶಾದ್ಯಂತ ಒಟ್ಟು 7,939 ಜನರನ್ನು ಬಂಧಿಸಲಾಗಿದೆ ಎಂದು ಕಜಕಿಸ್ತಾನದ ಆಂತರಿಕ ಸಚಿವಾಲಯ ವರದಿ ಮಾಡಿದೆ. 30 ವರ್ಷಗಳ ಹಿಂದಿನ ಸೋವಿಯತ್ ರಾಷ್ಟ್ರ ಎದುರಿಸಿದ್ದ ಅಶಾಂತಿ ಮತ್ತೆ ಮರುಕಳಿಸಿದಂತಹ ಸ್ಥಿತಿ ಎದುರಾಗಿದೆ ಎಂದು ಕಜಕಿಸ್ತಾನದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಮಿತಿ, ಕಜಕಿಸ್ತಾನ ಗುಪ್ತಚರ ಹಾಗೂ ಭಯೋತ್ಪಾದನಾ ವಿರೋಧಿ ಏಜೆನ್ಸಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದೆ. ಹಿಂಸಾಚಾರದಲ್ಲಿ ಬಲಿಯಾದ 164 ಜನರಿಗೆ ಶೋಕಾಚರಣೆ ನಡೆಸುವ ದಿನಾಂಕವನ್ನು ಘೋಷಿಸಿದೆ. ಇದನ್ನೂ ಓದಿ: ತೈಲ ಬೆಲೆ ಭಾರೀ ಏರಿಕೆ, ಕಜಕಿಸ್ತಾನದಲ್ಲಿ ಹಿಂಸಾಚಾರ – ಸರ್ಕಾರ ಪತನ
ಪ್ರತಿಭಟನೆ ಹೇಗಾಯಿತು?
ಇಂಧನ ಬೆಲೆಯನ್ನು ದ್ವಿಗುಣಗೊಳಿಸಿದ ಕಾರಣ ಜನವರಿ 2ರಂದು ಪ್ರತಿಭಟನೆ ಪ್ರಾರಂಭವಾಗಿತ್ತು. ತೀವ್ರಗತಿಯಲ್ಲಿ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗಿತ್ತು. ದೇಶದಲ್ಲಿ ಅಶಾಂತಿ ಹೆಚ್ಚಿದಂತೆ ಮಂತ್ರಿ ಕ್ಯಾಬಿನೆಟ್ ರಾಜೀನಾಮೆ ನೀಡಿದ್ದು, ಮಂತ್ರಿ ಕಾಸಿಮ್-ಜೋಮಾರ್ಟ್ ಟೊಕಾಯೆವ್ ಅವರು ನುರ್ಸುಲ್ತಾನ್ ನಜರ್ಬಯೇವ್ ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿದರು. ಸರ್ಕಾರ ರಿಯಾಯಿತಿಯಾಗಿ ವಾಹನ ಇಂಧನದ ಮೇಲೆ 180 ದಿನಗಳ ಬೆಲೆಮಿತಿಯನ್ನು ಹಾಗೂ ಯುಟಿಲಿಟಿ ದರದ ಹೆಚ್ಚಳವನ್ನು ತೆಗೆದು ಹಾಕಿತ್ತು. ರಿಯಾಯಿತಿಯ ಬಳಿಕವೂ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟಿತು. ಇದನ್ನೂ ಓದಿ: ಕಜಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ ಪ್ರತಿಭಟನೆಗೆ 18 ಅಧಿಕಾರಿಗಳು ಬಲಿ
ಸರ್ಕಾರಿ ಕಟ್ಟಡಗಳನ್ನು ಸುಟ್ಟು ಹಾಕಲಾಯಿತು. ಕಜಕಿಸ್ತಾನದ ಅತೀ ದೊಡ್ಡ ನಗರವಾದ ಅಲ್ಮಾಟಿಯಲ್ಲಿ ಪ್ರತಿಭಟನಾಕಾರರು ದಾಳಿ ನಡೆಸಿ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡರು. ಹಲವು ದಿನಗಳವರೆಗೆ ಬೀದಿಗಳಲ್ಲಿ ಆಗಾಗ ಗುಂಡಿನ ಚಕಮಕಿಗಳು ನಡೆಯುತ್ತಲೇ ಇದ್ದವು. ಘಟನೆಯಲ್ಲಿ ನೂರಾರು ಜನರು ಸಾವನ್ನಪ್ಪಿದರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ
ತೀವ್ರವಾದ ಅಶಾಂತಿಯನ್ನು ಅಧಿಕಾರಿಗಳು ನಿಯಂತ್ರಣಕ್ಕೆ ತರಲು ಸಾಧ್ಯವಾಗದೇ ತುರ್ತು ಪರಿಸ್ಥಿತಿ ಘೋಷಿಸಿದರು. ರಷ್ಯಾ ನೇತೃತ್ವದ ಮಿಲಿಟರಿ ಒಕ್ಕೂಟವಾದ ಕಲೆಕ್ಟಿವ್ ಸೆಕ್ಯೂರಿಟಿ ಟ್ರೀಟಿ ಆರ್ಗನೈಸೇಶನ್ನಿಂದ ಸಹಾಯ ಕೋರಲಾಯಿತು. ಸುಮಾರು 2,500 ರಷ್ಯಾದ ಸೈನಿಕರನ್ನು ಕಜಕಿಸ್ತಾನಕ್ಕೆ ಕಳುಹಿಸಲಾಯಿತು. ಹೀಗೆ ಸುಮಾರು 8 ಸಾವಿರ ಪ್ರತಿಭಟನಾಕಾರರನ್ನು ಬಂಧಿಸಲು ಸಾಧ್ಯವಾಯಿತು ಎಂದು ಕಜಕಿಸ್ತಾನದ ಅಧಿಕಾರಿಗಳು ತಿಳಿಸಿದರು.