ತಿರುವನಂತಪುರ: ಇಂದು ಬೆಳ್ಳಂಬೆಳಗ್ಗೆ ಮತ್ತೆ ಶಬರಿಮಲೆ ಪ್ರವೇಶಿಸಲು ಮುಂದಾದ ಇಬ್ಬರು ಮಹಿಳೆಯರನ್ನು ಭಕ್ತಾಧಿಗಳು ತಡೆದು ಶಬರಿಮಲೆ ದೇವಾಲಯದ ಬಳಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಬೆಳಗ್ಗೆ ಪಂಪಾ ಬೇಸ್ ಕ್ಯಾಂಪ್ ದಾಟಿಕೊಂಡು ಸಾಗುತ್ತಿದ್ದ ಮಹಿಳೆಯರನ್ನ ಪ್ರತಿಭಟನಾಕಾರರು ಸುತ್ತುವರೆದು, ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸದಂತೆ ತಡೆದಿದ್ದಾರೆ. ಒಟ್ಟು 9 ಮಹಿಳೆಯರ ಗುಂಪು ಶಬರಿಮಲೆ ದೇವಾಲಯ ಪ್ರವೇಶಿಸಲು ಬಂದಿದ್ದರು. ಇವರಲ್ಲಿ 30 ವರ್ಷ ವಯಸ್ಸಿನ ಈ ಇಬ್ಬರು ಮಹಿಳೆಯರು ಕೂಡ ಗುಂಪಿನಲ್ಲಿದ್ದರು ಎಂದು ವರದಿಯಾಗಿದೆ.
ಮೊದಲು ಈ ಇಬ್ಬರು ಮಹಿಳೆಯರನ್ನು 6-7 ಪ್ರತಿಭಟನಾಕಾರರು ಬೇಸ್ ಕ್ಯಾಂಪ್ ಬಳಿ ತಡೆದಿದ್ದಾರೆ. ಬಳಿಕ ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಸುಮಾರು 2 ಸಾವಿರ ಪ್ರತಿಭಟನಾಕಾರರು ಶಬರಿಮಲೆ ಬೆಟ್ಟದ ಮೇಲೆ ಒಟ್ಟಾಗಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಅವರನ್ನು ತಡೆಯಲು ಬಂದ ಪೊಲೀಸರ ಬಳಿಯೂ ಪ್ರತಿಭಟನಾಕಾರರು ಜಗಳ ಮಾಡಿದ್ದಾರೆ. ಸದ್ಯ ಇಬ್ಬರು ಮಹಿಳೆಯರಿಗೆ ಪೊಲೀಸರು ಭದ್ರತೆ ಒದಗಿಸಿ ಪೊಲೀಸ್ ವಾಹನದಲ್ಲಿಯೇ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.
ಈ ಕುರಿತು ಕೇರಳ ಮೂಲದ ಓರ್ವ ಮಹಿಳೆ ಮಾತನಾಡಿ, ನನಗೆ ಹಲವರು ಜೀವಬೆದರಿಕೆಗಳನ್ನು ಹಾಕಿದ್ದಾರೆ. ಅವರು ನನ್ನನ್ನು ಭಯಪಡಿಸಿದರು ನಾನು ಖಂಡಿತ ವಾಪಸ್ ಹೋಗುವುದಿಲ್ಲ. ಅಲ್ಲಿ ಅಯ್ಯಪ್ಪ ಸ್ವಾಮಿ ಇದ್ದಾನೆ. ಮಹಿಳೆಯರು ದೇವಾಲಯ ಪ್ರವೇಶಿಸಲು ಅಯ್ಯಪ್ಪನಿಗೇ ಆಕ್ಷೇಪವಿಲ್ಲ. ಆದ್ರೆ ಈ ಜನರು ಯಾಕೆ ಮಹಿಳೆಯರ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ ಕಳೆದ ತಿಂಗಳು ಭಾರಿ ಸುದ್ದಿಯಾಗಿದ್ದ ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರ ಪೈಕಿ ಒಬ್ಬರಾದ ಕನಕದುರ್ಗ ಎಂಬ ಮಹಿಳೆ ಎರಡು ವಾರದ ಬಳಿಕ ಮನೆಗೆ ವಾಪಾಸ್ ತೆರಳಿದ್ದರು. ಸೋಮವಾರದಂದು ಮನೆಗೆ ತೆರೆಳಿದ್ದ ಕನಕದುರ್ಗ ಅವರು ಶಬರಿಮಲೆ ಪ್ರವೇಶಿಸಿದಕ್ಕೆ ಅವರ ಗಂಡನ ಮನೆಯವರು ಆಕೆಯ ಮೇಲೆ ಹಲ್ಲೆ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv