ಕೊಪ್ಪಳ: ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ ಆದ್ರೆ ಬೀದಿ ನಾಯಿ ಒಂದಕ್ಕೆ ಹೆದರಿ ದಿನವಿಡೀ ದೊಣ್ಣೆ ಹಿಡಿದು ಓಡಾಡುವಂತಾಗಿದೆ ಈ ಗ್ರಾಮಸ್ಥರ ಪರಿಸ್ಥಿತಿ.
ಹೌದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಟ್ನೇಕಲ್ ಗ್ರಾಮದಲ್ಲಿ ಇಂತಹದೊಂದು ಘಟನೆ ನೆಡದಿದೆ. ಈ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳಿಗೆ ಹೆದರಿ ಜನರು ದೊಣ್ಣೆಯ ಆಸರೆಯನ್ನು ಪಡೆದಿದ್ದಾರೆ. ಕೇವಲ ಬೀದಿ ನಾಯಿಗಳಿಂದ ಕೊಟ್ನೇಕಲ್ ಗ್ರಾಮದ ಇಡೀ ಚಿತ್ರಣವೇ ಬದಲಾಗಿದೆ. ಇಲ್ಲಿನ ಜನರು ಮನೆಯಿಂದ ಹೊರಹೋಗಬೇಕೆಂದರೆ ಒಬ್ಬರೆ ಹೋಗಲ್ಲ ಜೊತೆಗೆ ದೊಣ್ಣೆ ಅಥವಾ ಕೋಲನ್ನು ತಮ್ಮೊಡನೆ ಕೊಂಡೊಯ್ಯುತ್ತಾರೆ. ಬೀದಿ ನಾಯಿಗಳ ಹಾವಳಿಗೆ ಬೇಸತ್ತಿರುವ ಇಲ್ಲಿನ ಗ್ರಾಮಸ್ಥರು ನಾಯಿಗಳಿಂದ ರಕ್ಷಣೆಗಾಗಿ ದೊಣ್ಣೆ ಹಿಡಿದು ಓಡಾಡುತ್ತಿದ್ದಾರೆ.
ಕಳೆದ 2 ತಿಂಗಳಲ್ಲಿ ಬರೋಬ್ಬರಿ 60 ರಿಂದ 70 ಮಂದಿಗೆ ಬೀದಿ ನಾಯಿಗಳು ಕಚ್ಚಿವೆ. ನಾಯಿಗಳ ಹಾವಳಿಯಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಸ್ತಬ್ಧವಾಗಿದೆ. ಜನರು ಮನೆಯ ಹೊರಗೆ ಬರೋದಕ್ಕೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಶೌಚಾಲಯಕ್ಕೆ ಹೋಗಬೇಕು ಅಂದರೂ ಕೈಯಲ್ಲಿ ಕೋಲು ಹಿಡ್ಕೊಂಡು ಹೊರಗಡೆ ಹೋಗುವಂತಾಗಿದೆ. ನಾಯಿ ಯಾವಾಗ ಬರುತ್ತೋ ಎಲ್ಲಿ ನಮ್ಮನ್ನು ಕಚ್ಚುತ್ತೋ ಅನ್ನುವ ಭಯದ ವಾತಾವರಣ ಎಲ್ಲೆಡೆ ಸೃಷ್ಟಿಯಾಗಿದೆ. ಹೆಚ್ಚಾಗಿರುವ ನಾಯಿ ಹಾವಳಿಯಿಂದ ಈ ಗ್ರಾಮದಲ್ಲಿ ಹೊಲ ಗದ್ದೆಗಳಿಗೆ ಕೆಲಸಕ್ಕೆ ಹೋಗುವವರ ಸಂಖ್ಯೆಯು ಕಡಿಮೆಯಾಗಿದ್ಯಂತೆ.
ಇಷ್ಟೆಲ್ಲ ಆದರೂ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿರುವ ನಾಯಿಯ ಸಲುವಾಗಿ ಗ್ರಾಮಸ್ಥರು ಭಯಬೀತರಾಗಿದ್ದಾರೆ. ಗ್ರಾಮ ಪಂಚಾಯ್ತಿಗೆ ಬೀದಿ ನಾಯಿಗಳ ಕುರಿತು ಕ್ರಮ ತೆಗೆದುಕೊಳ್ಳಿ ಎಂದು ಅಲ್ಲಿನ ಜನರು ದೂರು ನೀಡಿದ್ದರು. ಇದೀಗ ಈ ವಿಚಾರವನ್ನು ಗ್ರಾಮ ಪಂಚಾಯ್ತಿ ಸದಸ್ಯರು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದು, ಇನ್ನೆರೆಡು ದಿನದಲ್ಲಿ ನಾಯಿಯನ್ನು ಹಿಡಿಯುತ್ತೇವೆ ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv