ಧಾರವಾಡ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿದ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಗ್ರಾಮದಲ್ಲಿನ ಈರವ್ವ ಹಾಗೂ ನಾರಾಯಣ ಗಡಾದ ದಂಪತಿಯ ಪುತ್ರ ಬಸವರಾಜ ಗಡಾದ ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ವಾಪಸ್ಸಾಗಿದ್ದಕ್ಕೆ ಗ್ರಾಮಸ್ಥರು ಅವರನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು.
ಮದ್ರಾಸ್ ರಿಜೆಮೆಂಟ್ ನಲ್ಲಿ ಹವಾಲ್ದಾರ್ ಆಗಿದ್ದ ಯೋಧ ಬಸವರಾಜ, ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಂಚಗಾಂವ್ ನಲ್ಲಿ ಉಗ್ರರ ಜೊತೆ ಸೆಣಸಾಡಿ, ಇಬ್ಬರು ಉಗ್ರರನ್ನ ಹೊಡೆದಿದ್ದಾರೆ. ಅಲ್ಲದೆ ನೌಶೇರಾ ಜಿಲ್ಲೆಯಲ್ಲಿ ಕೂಡ ಉಗ್ರರ ಮೇಲೆ ದಾಳಿ ಮಾಡಿದ ಕಿರ್ತಿ ಇವರದ್ದು. ಜಮ್ಮು ಕಾಶ್ಮೀರ, ಸಿಯಾಚಿನ್, ಲೇಹ್, ಲಡಾಖ್ ಸೇರಿದಂತೆ ಇತರೆ ಪ್ರದೇಶಗಳಲ್ಲಿ 17 ವರ್ಷ ಸೇವೆ ಸಲ್ಲಿಸಿದ ಬಳಿಕ ಇದೀಗ ತವರಿಗೆ ವಾಪಾಸ್ಸಾಗಿದ್ದಾರೆ.
ಗ್ರಾಮದ ಅಪ್ನಾದೇಶ ಬಳಗ, ಶಾಲಾ ಮಕ್ಕಳು, ಹೆಬ್ಬಳ್ಳಿ ಗ್ರಾಮದ ಗುರು ಹಿರಿಯರು, ಗಡಾದ ಅವರ ಸ್ನೇಹಿತರ ಬಳಗದಿಂದ ತೆರದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು. 5 ಶಾಲೆಯ ಮಕ್ಕಳು ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಂತರ ಗ್ರಾಮ ಪಂಚಾಯತ್ ವತಿಯಿಂದ ಯೋಧನನ್ನು ಸನ್ಮಾನಿಸಿ ಗೌರವಿಸಲಾಯಿತು. ಯೋಧನ ಮೆರವಣಿಯುದ್ದಕ್ಕೂ ಭಾರತ ಮಾತಾಕೀ ಜೈ, ಒಂದೇ ಮಾತರಂ ಎನ್ನುವ ದೇಶಭಕ್ತಿಯ ಜಯ ಘೋಷಗಳು ಕೇಳಿಬಂದವು.