ವಿಜಯಪುರ: ಜಗಳವಾಡಿ ತವರು ಮನೆಗೆ ಹೋಗಿದ್ದ ಪತ್ನಿಯನ್ನ ಕರೆತರಲು ತೆರಳಿದ್ದ ಪತಿ ಹಾಗೂ ಆತನ ಕುಟುಂಬಸ್ಥರನ್ನ ಗ್ರಾಮಸ್ಥರು ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪ ಗ್ರಾಮದ ಕಮಲವ್ವ ವಡ್ಡರ ಹಾಗೂ ನಿಡಗುಂದಿ ತಾಲೂಕಿನ ಬಿದ್ನಾಳ ಗ್ರಾಮದ ಅಶೋಕ ವಡ್ಡರ ವಿವಾಹವಾಗಿತ್ತು. ಆದರೆ ಇಬ್ಬರು ಪರಸ್ಪರ ಜಗಳವಾಡಿ ಕಮಲವ್ವ ತನ್ನ ತವರು ಮನೆಗೆ ಹೋಗಿದ್ದಳು. ಕಮಲವ್ವನಿಗೆ ಬುದ್ಧಿ ಹೇಳಿ ಕರೆತರಲೆಂದು ಪತಿ ಅಶೋಕ ಹಾಗೂ ಆತನ ಕುಟುಂಬಸ್ಥರು ಆಲಕೊಪ್ಪ ಗ್ರಾಮಕ್ಕೆ ಹೋಗಿದ್ದರು.
ಆಗ ಇಬ್ಬರ ಕುಟುಂಬಸ್ಥರು ಸಂಧಾನ ಮಾತುಕತೆ ಮಾಡುವಾಗ ಪರಸ್ಪರ ಮಾತಿನ ಚಕಮಕಿ ನಡೆದಿದೆ. ನಂತರ ಕೈ ಕೈಮಿಲಾಯಿಸುವ ಹಂತಕ್ಕೆ ಜಗಳ ತಲುಪಿದ್ದು, ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಅಶೋಕ ಕುಟುಂಬಸ್ಥರನ್ನ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಈ ಹಲ್ಲೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 10 ಜನರಿಗೆ ಗಾಯಗಳಾಗಿದೆ. ಹಲ್ಲೆ ವೇಳೆ ಅಶೋಕ ಪರಾರಿಯಾಗಿದ್ದು, ಗಾಯಾಳುಗಳನ್ನ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ 6 ಜನರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆದಿದ್ದಾರೆ.