ಮಂಡ್ಯ: ಎರಡು ಚಿರತೆ ಮರಿಗಳನ್ನ ಗ್ರಾಮಸ್ಥರು ರಕ್ಷಣೆ ಮಾಡಿರುವಂತ ಘಟನೆ ಜಿಲ್ಲೆಯ ಪಾಂಡವಪುರದಲ್ಲಿರುವ ಬೇಬಿ ಬೆಟ್ಟದಲ್ಲಿ ನಡೆದಿದೆ.
ಪಾಂಡವಪುರದ ಬೇಬಿ ಬೆಟ್ಟದ ಪಕ್ಕದಲ್ಲಿರುವ ಬನ್ನಂಗಾಡಿ ಗ್ರಾಮಸ್ಥರು ಚಿರತೆ ಮರಿಗಳ ರಕ್ಷಣೆ ಮಾಡಿದ್ದಾರೆ. ಭಾನುವಾರ ಗ್ರಾಮಸ್ಥರು ಬೆಟ್ಟದ ಬಳಿ ಹೋಗಿದ್ದಾಗ ಅವರನ್ನ ಕಂಡು ದೊಡ್ಡ ಚಿರತೆಗಳು ಜಾಗ ಖಾಲಿ ಮಾಡಿವೆ. ಈ ಸಂದರ್ಭದಲ್ಲಿ ಅಲ್ಲೆ ಇದ್ದ ಮರಿ ಚಿರತೆಗಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ನಂತರ ಅವುಗಳನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಮರಿ ಚಿರತೆಗಳನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.
ಇನ್ನು ಚಿರತೆ ಮರಿಗಳು ಸಿಕ್ಕಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಬಂದು ತಮ್ಮ ವಶಕ್ಕೆ ಚಿರತೆ ಮರಿಗಳನ್ನು ಪಡೆದುಕೊಂಡಿದ್ದಾರೆ.