ಶಿವಮೊಗ್ಗ: ದರಾಕಾಸ್ತಿನ ಅಡಿಯಲ್ಲಿ ದಲಿತರಿಗೆ ಮಂಜೂರಾಗಿದ್ದ ಜಮೀನನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆಯಲು ಯತ್ನಿಸಿದ್ದು, ಜಮೀನು ಬಿಡಲು ಒಪ್ಪದ ರೈತರ ಮೇಲೆ ದೌರ್ಜನ್ಯ ನಡೆಸಿ, ಹಲ್ಲೆ ನಡೆಸಿದ್ದಾರೆ. ಅದು ಅಲ್ಲದೇ ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ತಾಲೂಕಿನ ದೇವಕಾತಿಕೊಪ್ಪ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗದ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇವಕಾತಿಕೊಪ್ಪ ಹೊರವಲಯದ ಸರ್ವೇ ನಂ 115 ರಿಂದ 126ರ ವರೆಗಿನ ಭೂಮಿಯಲ್ಲಿ 12 ಮಂದಿ ದಲಿತ ಕುಟುಂಬಗಳಿಗೆ 1979 ರಲ್ಲಿ ಅಂದಿನ ಸರ್ಕಾರ ತಲಾ 2 ಎಕರೆಯಂತೆ 24 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಕಂದಾಯ ಇಲಾಖೆ ಈ ಭೂಮಿಗೆ ಪಣಿ ಹಾಗೂ ಖಾತೆ ಮಾಡಿ ಕೊಟ್ಟಿತ್ತು. ಇದನ್ನೂ ಓದಿ: ಪೋಕ್ಸೋ ಆರೋಪಿ ಠಾಣೆಯಿಂದ್ಲೇ ಎಸ್ಕೇಪ್ – ನಾಲ್ವರು ಪೊಲೀಸರು ಸಸ್ಪೆಂಡ್
ಕಳೆದ ಎರಡು ದಿನದ ಹಿಂದೆ ಈ ಭೂಮಿಯಲ್ಲಿದ್ದ ಗಿಡ ಗಂಟೆಗಳನ್ನು ಕಡಿದು ಸ್ವಚ್ಛಗೊಳಿಸಿ ಸಾಗುವಳಿಗೆ ಮುಂದಾಗಿದ್ದ ರೈತರ ಮೇಲೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ನಾಲ್ವರು ರೈತರ ವಿರುದ್ಧ ಶ್ರೀಗಂಧ ಕಳವು ಮಾಡಿರುವುದಾಗಿ ಪ್ರಕರಣ ದಾಖಲಿಸಿರುವ ಅರಣ್ಯ ಸಿಬ್ಬಂದಿ ನಾಲ್ವರು ರೈತರನ್ನು ಜೈಲಿಗೆ ಕಳುಹಿಸಿದ್ದಾರೆ. ನಿಜವಾಗಿಯೂ ಶ್ರೀಗಂಧ ಕಳವು ಮಾಡಿದ್ದರೆ ತನಿಖೆ ನಡೆಸಿ ಶಿಕ್ಷೆ ಕೊಡಲಿ ಅದು ಬಿಟ್ಟು ಸುಳ್ಳು ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸುಳ್ಳು ದೂರು ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.