ಮಂಡ್ಯ: ಶಿವರಾತ್ರಿ ಹಬ್ಬದಂದು ರಾತ್ರಿ ಎಲ್ಲರೂ ಶಿವನ ದೇವಾಲಯದ ಮುಂದೆ ಜಾಗರಣೆ ಮಾಡೋದನ್ನ ನೀವು ಕೇಳಿರ್ತೀರಿ. ಆದ್ರೆ ಮಂಡ್ಯದ ಹಳ್ಳಿಯೊಂದರ ಜನ ಮಾತ್ರ ಬೋರ್ವೆಲ್ ಲಾರಿ ಮುಂದೆ ಕುಳಿತು ಜಾಗರಣೆ ಮಾಡಿದ್ದಾರೆ.
ಹೌದು. ಮಂಡ್ಯ ತಾಲೂಕಿನ ಗುಡಿಗೇನಹಳ್ಳಿ ಗ್ರಾಮಸ್ಥರಿಗೆ ಕುಡಿಯೋಕೆ ನೀರಿಲ್ಲ. ಹೀಗಾಗಿ ಹೊಸ ಬೋರ್ ಕೊರೆಯೋವರೆಗೂ ನಾವು ಜಾಗರಣೆ ಮಾಡ್ತೀವಿ ಅಂತಾ ಗ್ರಾಮಸ್ಥರು ಮಕ್ಕಳ ಸಮೇತ ಪ್ರತಿಭಟನೆ ಮಾಡಿದ್ರು.
ನೀರಿಲ್ಲದ ಕೊಳವೆ ಬಾವಿಯನ್ನ ಈ ಹಿಂದೆ ಎಷ್ಟು ಅಡಿ ಆಳ ಇತ್ತೋ ಅಷ್ಟೇ ಅಡಿ ಆಳಕ್ಕೆ ಮತ್ತೆ ಕೊರೆಸಿದ್ರೆ ಪ್ರಯೋಜನವಾದ್ರೂ ಏನು. ರೀ ಬೋರ್ ಅನ್ನೋದು ಅಧಿಕಾರಿಗಳ ಹಣ ದೋಚುವ ತಂತ್ರ ಇದಾಗಿದೆ. ನೀರಿಲ್ಲದ ಕಡೆ ಬೋರ್ವೆಲ್ ಕೊರೆದು ಅಧಿಕಾರಿಗಳು ಹಣ ದೋಚುತ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ರು. ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನಮ್ಮ ಬದುಕೇ ಹಾಳಾಗಿದೆ ಅಂತಾ ಸಿಟ್ಟು ಹೊರಹಾಕಿದ್ರು.
ಒಟ್ಟಿನಲ್ಲಿ ಈ ಗ್ರಾಮದಲ್ಲಿ ನೀರಿಲ್ಲದೇ 15 ದಿನಗಳೇ ಕಳೆದಿವೆ. ಈ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದೆಲ್ಲ ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವಾಗ ಅರ್ಥ ಆಗುತ್ತೋ ತಿಳಿಯದು ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.