ಚಂಡೀಗಢ: ಅಪ್ರಾಪ್ತ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಕ್ಕೆ ಗ್ರಾಮಸ್ಥರು ಇಬ್ಬರು ಮಕ್ಕಳ ತಾಯಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸಿದ ಘಟನೆ ಹರಿಯಾಣದ ಕರ್ನಾಲ್ನಲ್ಲಿ ನಡೆದಿದೆ.
ಅಪ್ರಾಪ್ತನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂಬ ಆರೋಪ ಕೇಳಿ ಗ್ರಾಮಸ್ಥರು ಮೊದಲು ಇಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂಚಾಯ್ತಿ ಇಬ್ಬರನ್ನು ಗ್ರಾಮದಿಂದ ಹೊರ ಹೋಗಲು ಆದೇಶಿಸಿದ್ದಾರೆ. ಈ ಬಗ್ಗೆ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಘಟನೆ ಬಗ್ಗೆ ಮೊದಲು ನಾವು ತನಿಖೆ ನಡೆಸುತ್ತೇವೆ. ಬಳಿಕ ತಪ್ಪಿತಸ್ಥರು ಯಾರು ಎಂಬುದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ಅಗತ್ಯವಿದ್ದರೆ, ನಾವು ಅಪ್ರಾಪ್ತ ಬಾಲಕನಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತೇವೆ. ಅವನಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದು ಡಿಎಸ್ಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮದ ಮುಖ್ಯಸ್ಥ, ಮಹಿಳೆ ಬಿಹಾರ್ ನಿವಾಸಿಯಾಗಿದ್ದು, ಬಾಲಕ 12ನೇ ತರಗತಿ ಓದುತ್ತಿದ್ದಾನೆ. ಈ ಘಟನೆ ಬಗ್ಗೆ ಪಂಚಾಯ್ತಿಯಲ್ಲಿ ಸಭೆ ನಡೆದಿದೆ ಎಂಬ ವಿಷಯ ತಿಳಿಯಿತು. ಆದರೆ ಅಲ್ಲಿ ಏನೂ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇದುವರೆಗೂ ವೈರಲ್ ವಿಡಿಯೋ ಕೂಡ ನೋಡಿಲ್ಲ. ಮಹಿಳೆಗೆ ಮದುವೆ ಆಗಿ ಮಕ್ಕಳಿದ್ದು, ಇಬ್ಬರು ಬೇರೆ ಜಾತಿಯವರು ಎಂದು ತಿಳಿಸಿದ್ದಾರೆ.
ಅಲ್ಲದೆ ಇದನ್ನು ಬಂಜಾರಾ ಸಮುದಾಯದವರು ಮಾಡಿದ್ದಾರೆ. ಪಂಚಾಯ್ತಿ ಸದಸ್ಯರು ನನ್ನ ಮಗನಿಗೆ ಹಾಗೂ ಮಹಿಳೆಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ ಎಂದು ಬಾಲಕನ ತಂದೆ ಹೇಳುತ್ತಿದ್ದಾರೆ ಎಂದು ಗ್ರಾಮದ ಮುಖ್ಯಸ್ಥ ತಿಳಿಸಿದ್ದಾರೆ.