ಬಾಗಲಕೋಟೆ: ಪ್ರವಾಹದ ಮಧ್ಯೆಯೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ರಾಮಲಿಂಗೇಶ್ವರ ಜಾತ್ರೆ ನಡೆಯಿತು.
ಈ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಜಾತ್ರೆ ನಡೆಯಲ್ಲ ಎಂದು ಎಲ್ಲರೂ ಎಂದುಕೊಂಡಿದ್ದರು. ಆದರೆ ಆ ಜನರಿಗೆ ದೇವರ ಮೇಲೆ ಇರುವ ಭಕ್ತಿಗೆ ಪ್ರವಾಹದ ನೀರು ಲೆಕ್ಕಕ್ಕೆ ಬರಲಿಲ್ಲ. ತಮ್ಮ ನೋವು ನುಂಗಿಕೊಂಡು ಭಕ್ತರು ರಾಮಲಿಂಗೇಶ್ವರ ಜಾತ್ರೆ ಮಾಡಿದರು.
ಗ್ರಾಮದಲ್ಲಿ ನಿಂತಿದ್ದ ನೀರಲ್ಲೇ ಯುವಕರ ದಂಡು ಎತ್ತರದ ತೇರು ಎಳೆದು ಭಕ್ತಿ ಮೆರೆದರು. ಕೃಷ್ಣಾ ನದಿ ತೀರದ ಹಳಿಂಗಳಿ ಗ್ರಾಮದ ರಾಮಲಿಂಗೇಶ್ವರ ಜಾತ್ರೆಯ ರಥೋತ್ಸವವು ಪ್ರವಾಹದಿಂದ ತುಂಬಿದ ನೀರಿನಲ್ಲಿಯೆ ಜರುಗಿತು.
ಶ್ರಾವಣ ಮಾಸದ ಎರಡನೇ ಸೋಮವಾರದಂದು ನಡೆಯುವ ಜಾತ್ರೆಯೂ ಶತಮಾನದ ಇತಿಹಾಸವನ್ನು ಹೊಂದಿದೆ. ಆದರೆ ಪ್ರವಾಹದ ನೋವಿನಲ್ಲಿ ಇರುವ ರೈತರು ಭಕ್ತಿಯನ್ನು ಬಿಟ್ಟುಕೊಡದೇ ನೀರಿನಲ್ಲಿಯೆ ರಥವನ್ನು ಎಳೆದರು. ನಂದಿಕೊಲು, ಪಲ್ಲಕ್ಕಿ ಉತ್ಸವ ಗಳು ಕೂಡ ವಾದ್ಯಮೇಳಗಳೊಂದಿಗೆ ನೀರಿನಲ್ಲಿಯೇ ನಡೆಯಿತು.