ಹಾಸನ: ಬೈಕ್ ಸವಾರನೊಬ್ಬನನ್ನು ಅಡ್ಡಗಟ್ಟಿ ಆತನ ಬಳಿ ಇದ್ದ ಚಿನ್ನದ ಚೈನ್ ಹಾಗೂ ಐದು ಸಾವಿರ ಹಣ ಕಸಿದು ಪರಾರಿಯಾಗುತ್ತಿದ್ದ ಮೂವರು ದರೋಡೆಕೋರರಿಗೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಬ್ಬೂರು ಮಾಚೇನಹಳ್ಳಿ ಗ್ರಾಮಸ್ಥರು ತಕ್ಕ ಪಾಠ ಕಲಿಸಿದ್ದಾರೆ.
ಅಬ್ಬೂರು ಮಾಚೇನಹಳ್ಳಿ ಗ್ರಾಮದ ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಒಂದೇ ಬೈಕ್ನಲ್ಲಿ ಬಂದಿದ್ದ ಮೂವರು ದರೋಡೆಕೋರರು ಮಾಚೇನಹಳ್ಳಿ ಗ್ರಾಮದ ಬಳಿ ಬೈಕ್ ಸವಾರನೊಬ್ಬನನ್ನು ಅಡ್ಡಗಟ್ಟಿ ಹೆದರಿಸಿದ್ದಾರೆ. ಬಳಿಕ ಆತನ ಬಳಿ ಇದ್ದ ಚಿನ್ನದ ಚೈನ್ ಹಾಗೂ ಐದು ಸಾವಿರ ಹಣ ಕಸಿದು ಪರಾರಿಯಾಗುತ್ತಿದ್ದರು. ಈ ವೇಳೆ ದರೋಡೆಕೋರರನ್ನು ಗ್ರಾಮಸ್ಥರು ಬೆನ್ನಟ್ಟಿ ಮೂವರನ್ನೂ ಹಿಡಿದಿದ್ದಾರೆ. ನಂತರ ಗ್ರಾಮದಲ್ಲಿ ಅವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿ ಬೆವರಿಳಿಸಿದ್ದಾರೆ.
ಬಳಿಕ ಪೊಲೀಸರಿಗೆ ಈ ಬಗ್ಗೆ ಗ್ರಾಮಸ್ಥರು ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಖದೀಮರನ್ನು ವಶಕ್ಕೆ ಪಡೆದಿದ್ದಾರೆ.