ಬೆಳಗಾವಿ(ಚಿಕ್ಕೋಡಿ): ಮಂಗಳವಾರದಂದು ಆಹಾರ ಅರಸಿ ಕಬ್ಬಿನ ಗದ್ದೆಗೆ ನುಗಿದ್ದ ಬೃಹತ್ ಗಾತ್ರದ ಮೊಸಳೆಯನ್ನು ಸೆರೆಹಿಡಿದ ಬಳಿಕ, ತಡರಾತ್ರಿ ಹುಲಗಬಾಳಿ ಗ್ರಾಮದಲ್ಲಿ ಮತ್ತೊಂದು ಮೊಸಳೆಯನ್ನು ಗ್ರಾಮಸ್ಥರು ಸೆರೆಹಿಡಿದಿದ್ದಾರೆ.
ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ 10 ಅಡಿ ಉದ್ದದ ಮೊಸಳೆಯನ್ನು ಗ್ರಾಮಸ್ಥರು ಸೆರೆಹಿಡಿದಿದ್ದಾರೆ. ಕೃಷ್ಣಾ ನದಿಯಲ್ಲಿ ನೀರು ಇಲ್ಲದ ಕಾರಣ ಗ್ರಾಮಗಳಿಗೆ ಮೊಸಳೆಗಳು ಆಹಾರ ಅರಸಿ ನುಗ್ಗುತ್ತಿವೆ. ಮಂಗಳವಾರವೂ ಕೂಡ ಸುಮಾರು 15 ಅಡಿ ಉದ್ದದ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಈ ಭಾಗದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು ಆತಂಕಕ್ಕೆ ಒಳಗಾದ ರೈತರು ಹಾಗೂ ಗ್ರಾಮಸ್ಥರು ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಗ್ರಾಮಸ್ಥರಿಂದ ಬೃಹತ್ ಗಾತ್ರದ ಮೊಸಳೆ ಸೆರೆ!
ಸತ್ತಿ, ಸವದಿ, ದರೂರ, ಸಂಕ್ರಟ್ಟಿ, ನದಿ ಇಂಗಳಗಾಂವ್, ಸಪ್ತಸಾಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಆಗಾಗ ಮೊಸಳೆಗಳು ಜಮೀನುಗಳಲ್ಲಿ ಪತ್ತೆಯಾಗುತ್ತಿರುವುದು ರೈತರ ನಿದ್ದೆ ಕೆಡಿಸಿದೆ. ಕಳೆದ ಹದಿನೈದು ದಿನಗಳಲ್ಲಿ ಕೃಷ್ಣ ನದಿ ಸಂಪೂರ್ಣ ಬತ್ತಿರುವ ಪರಿಣಾಮ ಜಲಚರಗಳೂ ಕೂಡ ಆಹಾರ ಮತ್ತು ನೀರು ಸಿಗದೇ ಪರದಾಡುವಂತಾಗಿದೆ. ನದಿಯ ಸುತ್ತಮುತ್ತಲ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ. ಈ ನಡುವೆ ಹೀಗೆ ಆಹಾರ ಅರಸಿಕೊಂಡು ಜನವಸತಿ ಪ್ರದೇಶಗಳಿಗೆ ಮೊಸಳೆಗಳು ಎಂಟ್ರಿ ಕೊಡುತ್ತಿರುವುದು ನದಿ ತೀರದ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದೆ.