ತುಮಕೂರು: ಪೊಲೀಸರು ಅಮಾಯಕ ವ್ಯಕ್ತಿಯೊಬ್ಬರ ಮೇಲೆ ದೌರ್ಜನ್ಯ ಎಸಗಿದ್ದನ್ನು ಖಂಡಿಸಿ, ಹುಲಿಯೂರು ದುರ್ಗದ ಗ್ರಾಮಸ್ಥರು ಗೃಹ ಸಚಿವ ಜಿ ಪರಮೇಶ್ವರ್ ಅವರ ವಾಹನ ತಡೆಯಲು ಮುಂದಾದ ಘಟನೆ ಸೋಮವಾರ ನಡೆದಿದೆ.
ಪರಮೇಶ್ವರ್ ತಮ್ಮ ಸಹೋದರ ಮೃತ ಡಾ ಶಿವಪ್ರಸಾದ್ ಅವರ ಅಸ್ತಿಯನ್ನು ಶ್ರೀರಂಗಪಟ್ಟಣದ ಕಾವೇರಿ ನದಿಗೆ ಬಿಡಲು ವೋಲ್ವೋ ಬಸ್ಸಿನಲ್ಲಿ ತೆರಳುತ್ತಿದ್ದರು. ಈ ವಿಚಾರ ತಿಳಿದ ಗ್ರಾಮಸ್ಥರು ಬಸ್ ಹುಲಿಯೂರು ದುರ್ಗದ ಬಳಿ ಬಂದಾಗ ಅಡ್ಡಗಟ್ಟಲು ಪ್ರಯತ್ನಿಸಿದರು.
ಈ ವೇಳೆ ಅಲ್ಲೇ ಇದ್ದ ಪೊಲೀಸರು ಪ್ರತಿಭಟನಾ ನಿರತರನ್ನು ಮನವೊಲಿಸಿ, ಡಿಸಿಎಂ ವಾಹನ ಸಾಗಲು ಯಾವುದೇ ತೊಂದರೆ ಆಗದಂತೆ ಅನುವು ಮಾಡಿಕೊಟ್ಟರು.
ಅಡ್ಡ ಹಾಕಿದ್ದು ಯಾಕೆ?
ಕ್ಷುಲ್ಲಕ ಕಾರಣಕ್ಕೆ ರಾತ್ರಿವೇಳೆ ಮನೆ ಮುಂದೆ ಶಟಲ್ ಕಾಕ್ ಆಡುತ್ತಿದ್ದ ವ್ಯಕ್ತಿಯ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 40 ವರ್ಷದ ಪದ್ಮನಾಭ ಅವರು ತನ್ನ ಮನೆ ಮುಂದೆ ಶಟಲ್ ಆಡುತ್ತಿದ್ದರು. ಆಟ ನಿಲ್ಲಿಸಿ ಮನೆಯೊಳಗೆ ಹೋಗುವಂತೆ ಪೊಲೀಸರು ಗದರಿದ್ದಾರೆ. ತನ್ನ ಮನೆ ಎದುರಲ್ಲೇ ಆಟವಾಡುತ್ತಿದ್ದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ ಎಂದು ಪದ್ಮನಾಭ, ಇದೇ ವೇಳೆ ಪೊಲೀಸರ ಮಾತಿಗೆ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ಕೋಪಗೊಂಡ ಎ.ಎಸ್.ಐ ನಾರಾಯಣಸ್ವಾಮಿ, ಹಾಗೂ ಪೇದೆ ರಂಗಸ್ವಾಮಿ, ಪದ್ಮನಾಭನ ಮನೆಗೆ ನುಗ್ಗಿ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಪೃಷ್ಠ ಭಾಗದಲ್ಲಿ ಬಾಸುಂಡೆ ಬರುವಂತೆ ಲಾಠಿ ಏಟು ಕೊಟ್ಟಿದ್ದಾರೆ. ಮೈ ತುಂಬಾ ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪದ್ಮನಾಭ ವಿರುದ್ಧ ಕರ್ತವ್ಯಕ್ಕೆ ಅಡ್ಡಿಯಡಿ ಪ್ರಕರಣ ದಾಖಲಿಸಿ ಕುಣಿಗಲ್ ಜೆಎಂಎಫ್ ಸಿ ಕಿರಿಯ ಶ್ರೇಣಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಪದ್ಮನಾಭ ಅವರನ್ನು ನ್ಯಾಯಾಂಗ ಬಂಧನದಲ್ಲಿಟ್ಟು ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews