ವಿಜಯಪುರ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಪ್ರಬುದ್ಧ ರಾಜಕಾರಣಿ ಅಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು, ರಮೇಶ್ ಜಾರಕಿಹೊಳಿ ಏನೇ ಮಾಡಿರಲಿ ಈಗಲೂ ಕೂಡ ಆತ ನನ್ನ ಸ್ನೇಹಿತರು. ರಮೇಶ್ ಜಾರಕಿಹೊಳಿ ಇನ್ನು ಪ್ರಬುದ್ಧ ಆಗಿಲ್ಲ. ಅವರು ಇನ್ನು ಅಪ್ರಬುದ್ಧ ವ್ಯಕ್ತಿ ಇದ್ದಾರೆ ಎಂದು ರಮೇಶ್ ಕಾಲೆಳೆದರು.
ಇದೇ ವೇಳೆ ಪ್ರವಾಹ ಸಂತ್ರಸ್ತರಿಗೆ ಸಇಷ್ಟು ಕೊಟ್ಟಿದ್ದೆ ಹೆಚ್ಚಾಯ್ತು ಎಂದಿದ್ದ ಈಶ್ವರಪ್ಪ ಅವರ ವಿರುದ್ಧ ಕಿಡಿಕಾರಿದ ಅವರು, ನಾವು ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಬಾರದು ಸಲಹೆ ನೀಡಿದರು. ಇದು ಈಶ್ವರಪ್ಪನವರ ತೀರ ಕೆಳಮಟ್ಟದ ಹೇಳಿಕೆ. ಅವರು ಹಿರಿಯರು ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನೋವುಂಟು ಮಾಡುವ ಕೆಲಸವನ್ನು ಅವರು ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.
ರಾಜ್ಯಕ್ಕೆ 25% ಅನುದಾನ ಬರುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಹಾಗಾದರೆ 40 ಸಾವಿರ ಕೋಟಿ ನಷ್ಟ ಆಗಿದೆ ಎಂದು ಲೆಕ್ಕ ಯಾಕೇ ಮಾಡಿದ್ದು. ಇದೆಲ್ಲ ಆಗಬಾರದು. ಸಂತ್ರಸ್ತರ ಕಣ್ಣೀರನ್ನು ಎಲ್ಲರು ಸೇರಿ ಒರೆಸೋಣು ಎಂದು ಸಚಿವ ಮಾಧುಸ್ವಾಮಿಗೆ ಟಾಂಗ್ ನೀಡಿದರು. ಅಲ್ಲದೆ ಸಂತ್ರಸ್ತರು ಬದುಕು ಕಳೆದು ಕೊಂಡಿದ್ದಾರೆ. ಅದನ್ನು ಕಟ್ಟಿಕೊಡುವ ಕೆಲಸ ಮಾಡೋಣ ಎಂದು ಪಾಟೀಲ್ ಹೇಳಿದ್ದಾರೆ.
ಯೋಧರಿಗೆ ಅನರ್ಹ ಶಾಸಕರನ್ನು ಹೋಲಿಸಿದ ಶಾಸಕ ರೇಣುಕಾಚಾರ್ಯ ಅವರ ವಿಚಾರವಾಗಿ ಮಾತನಾಡಿ, ಯೋಧರಿಗೆ ಈ ರೀತಿಯ ದೊಡ್ಡ ಅಪಮಾನ ಬಹುಶಃ ಯಾರು ಮಾಡಿಲ್ಲ ಎಂದರು.