ವಿಜಯಪುರ: ಜೆಡಿಎಸ್ ಪಕ್ಷ ಸತ್ತು ಹೋಗಿದೆ. ಜೆಡಿಎಸ್ ಪಕ್ಷದ ಬಗ್ಗೆ ಯಾಕೆ ಕೇಳುತ್ತಿರಾ ಎಂದು ನೂತನ ಸಚಿವ ಕೆ.ಎಸ್ ಈಶ್ವರಪ್ಪ ವಿಜಯಪುರದ ಆಲಮಟ್ಟಿಯಲ್ಲಿ ವ್ಯಂಗ್ಯ ಮಾಡಿದ್ದಾರೆ.
ಶಾಸಕ ಉಮೇಶ ಕತ್ತಿಗೆ ಬಸವರಾಜ ಹೊರಟ್ಟಿ ಜೆಡಿಎಸ್ಗೆ ಬುಲಾವ್ ನೀಡಿದ್ದಾರೆ ಎಂಬುದಕ್ಕೆ ಗರಂ ಆದ ಈಶ್ವರಪ್ಪ, ಇನ್ನು ರಾಜ್ಯ ಬಿಜೆಪಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಯಾರೋ ಕುಡಿದು ಮಾತನಾಡಿದ್ದಾರೆ. ನಮ್ಮದು ಒಳ್ಳೆಯ ಸಚಿವ ಸಂಪುಟ ಆಗಿದೆ. ನಮ್ಮ ಪಕ್ಷ ನಂಬಿಕೊಂಡು ಬಂದವರಿಗೆ ಅನ್ಯಾಯ ಮಾಡಲ್ಲ ಎಂದು ತಿರುಗೇಟು ಕೊಟ್ಟರು.
ರೆಬೆಲ್ ಶಾಸಕರನ್ನು ಅನರ್ಹ ಮಾಡಿದ್ದು ಸಂವಿಧಾನ ವಿರೋಧಿ. ಮಾಜಿ ಸ್ಪೀಕರ್ ರಮೇಶಕುಮಾರ್ ಕಾಂಗ್ರೆಸ್ ಪರವಾಗಿ ಧೋರಣೆ ತೋರಿಸಿದ್ದಾರೆ ಎಂದರು. ಇನ್ನು ಉಳಿದ 13 ಸಚಿವ ಸ್ಥಾನಗಳನ್ನು ಅನರ್ಹ ಮೈತ್ರಿ ಸರ್ಕಾರದ ಶಾಸಕರಿಗೆ ನೀಡಲಾಗುವುದು. ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಅನರ್ಹ ಶಾಸಕರಿಗೆ ಬಿಜೆಪಿ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಲ್ಲ ಎಂದು ಭರವಸೆ ನೀಡಿದರು.