ವಿಜಯಪುರ: ಬಿಜೆಪಿಗೆ ಸರ್ಕಾರ ರಚನೆಗೆ ರಾಜ್ಯಪಾಲರ ನಿರ್ಣಯ ಜನರಿಗೆ ಅಸಮಾಧಾನ ನೀಡಿದೆ. ಗವರ್ನರ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ರಾಜ್ಯಪಾಲ ವಜೂವಾಯಿ ವಾಲಾ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದರ ಬಗ್ಗೆ ರಾಜ್ಯಪಾಲರು ಜನರಿಗೆ ವಿವರಣೆ ನೀಡಬೇಕು. ಯಡಿಯೂರಪ್ಪವರ ಪ್ರಮಾಣ ವಚನಕ್ಕೆ ತರಾತುರಿ ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ಇನ್ನು ರೆಬೆಲ್ ಶಾಸಕರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರೆಬೆಲ್ ಶಾಸಕರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅವರಿಗೆ ಶಿಕ್ಷೆ ಆಗಬೇಕೆಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು.
ಇದೇ ವೇಳೆ ಋಣ ಮುಕ್ತ ಕಾಯ್ದೆ ಜಾಹೀರಾತಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ದೂರವಿಟ್ಟಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೀಗೆ ಮಾಡಿದ್ದರೆ ಅದು ತಪ್ಪಾಗುತ್ತದೆ. ಋಣ ಮುಕ್ತ ಕಾನೂನನ್ನು ನಾವು ಸ್ವಾಗತಿಸುತ್ತೇವೆ. ಆದರೆ ಆ ಜಾಹೀರಾತಿನಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಬಿಟ್ಟಿದ್ದು ತಪ್ಪು ಎಂದು ಹೇಳಿದರು.
ಕಾಂಗ್ರೆಸ್ ಬೆಂಬಲದೊಂದಿಗೆ ಋಣ ಮುಕ್ತ ಕಾಯ್ದೆ, ಸಾಲ ಮನ್ನಾ ಆಗಿರುತ್ತದೆ. ಯಾವುದೇ ಕಾಯ್ದೆಯಾದರೂ ಅದು ಕಾಂಗ್ರೆಸ್ ಬಲದಿಂದಲೇ ಆಗಿರುತ್ತದೆ. ಯಾರಾದರು ಈ ಅಚಾತುರ್ಯ ಮಾಡಿರುತ್ತಾರೆ. ಅವರು ಅದನ್ನು ಸರಿ ಪಡೆಸಿಕೊಳ್ಳಬೇಕು ಎಂದು ಉತ್ತರಿಸಿದರು.