ವಿಜಯಪುರ: ಸಾಲಮನ್ನಾ ಆಗದ್ದಕ್ಕೆ ಮತ್ತೊಬ್ಬ ರೈತ ಬಲಿಯಾದ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಲಘಾಣ ಗ್ರಾಮದ ರೈತ ಸಂಗಪ್ಪ ಗರಸಂಗಿ ತನ್ನ ತೋಟದ ಮನೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಗಪ್ಪ ಬಸವನಬಾಗೇವಾಡಿಯ ರೋಣಿಹಾಳ ಗ್ರಾಮದ ಸಿಂಡಿಕೇಟ್ ಬ್ಯಾಂಕ್ನಲ್ಲಿ 2009 ರಲ್ಲಿ 50 ಸಾವಿರ ಸಾಲ ಮಾಡಿದ್ದರು. ಆದರೆ ಬಡ್ಡಿ ಸೇರಿ ಇಲ್ಲಿಯವರೆಗೆ 1.58 ಲಕ್ಷ ಸಾಲ ಆಗಿತ್ತು. ಸಾಲ ತೀರಿಸುವಂತೆ ಎರಡು ಬಾರಿ ಮನೆಗೆ ಬಂದು ಬ್ಯಾಂಕ್ ಸಿಬ್ಬಂದಿ ಒತ್ತಡ ಹಾಕಿದ್ದರು.
ಅಷ್ಟೇ ಅಲ್ಲದೆ ಒನ್ ಟೈಂ ಸೆಟಲ್ಮೆಂಟ್(ಓಟಿಎಸ್) ಮಾಡಲು ಬ್ಯಾಂಕ್ ಭಿತ್ತಿಪತ್ರ ಅಂಟಿಸಿತ್ತು. ಒಟಿಎಸ್ ಮಾಡಿದರೆ ಮರಳಿ ಸಾಲ ಸಿಗುವುದಿಲ್ಲ ಎಂದು ಸಂಗಪ್ಪ ಹೆದರಿದ್ದಾರೆ. ಅದ್ದರಿಂದ ಸಾಲಮನ್ನಾ ಅಗತ್ತೆ ಎಂದು ಕಾದು ಕಾದು ಸುಸ್ತಾಗಿ ಸಾಲಮನ್ನಾ ಅಗದ ಕಾರಣ ಬ್ಯಾಂಕ್ ಒಟಿಎಸ್ ಭಿತ್ತಿ ಪತ್ರಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
5 ಎಕರೆ ಜಮೀನು ಹೊಂದಿರುವ ಸಂಗಪ್ಪ 4 ವರ್ಷ ಬರಗಾಲದಿಂದ ಬೆಳೆ ಇಲ್ಲದೆ ಕಂಗಾಲಾಗಿದ್ದರು. ಕೊಲ್ಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.